ವಿಧಾನಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ: ಪ್ರತಿ ಕುಟುಂಬಕ್ಕೆ 2,500 ರೂ. ನೆರವು ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ ಜನಾರ್ದನ ರೆಡ್ಡಿ ಕೊಪ್ಪಳದ ಕನಕಗಿರಿಯಲ್ಲಿ ಬುಧವಾರ ವಿಧಾನಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ, ಕಾಂಗ್ರೆಸ್​​ನ ಗೃಹಲಕ್ಷ್ಮೀ ಘೋಷಣೆಗೆ ಟಕ್ಕರ್ ನೀಡಿದ್ದಾರೆ.

ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 2,500 ರೂ. ಆರ್ಥಿಕ ನೆರವು ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ‘ಚೆನ್ನಮ್ಮ ಅಭಯಹಸ್ತ’ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಪ್ರಕಟಿಸಲಾಗಿದೆ. ಸ್ತ್ರೀ ಶಕ್ತಿ ಗುಂಪಿಗೆ ಬಡ್ಡಿ ರಹಿತ 10 ಲಕ್ಷ ರೂ. ಸಾಲ ನಿಡಲಾಗುವುದು ಎಂದೂ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ, ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ವೇತನ ಹೆಚ್ಚಳ ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ.

‘ಹುಲಿ ಯಾವತ್ತೂ ಸಣ್ಣಪುಟ್ಟ ಬೇಟೆಯಾಡಲ್ಲ’

ಹುಲಿ ಯಾವತ್ತೂ ಸಣ್ಣಪುಟ್ಟ ಬೇಟೆಯಾಡುವುದಿಲ್ಲ. ಅದು ಕಾದು ನೋಡಿ ದೊಡ್ಡ ಜಿಂಕೆಯನ್ನೇ ಬೇಟೆಯಾಡುತ್ತದೆ. ಬೋನಿ​ನಲ್ಲಿದ್ದರೂ, ಜೈಲಿನಲ್ಲಿದ್ದರೂ ಹುಲಿ ಹುಲಿಯೇ ಎಂದು ಅವರು ಹೇಳಿದ್ದಾರೆ. ಕೆಲವು ಹುಚ್ಚು ರಾಜಕಾರಣಿಗಳು 12 ವರ್ಷದಿಂದ ರೆಡ್ಡಿ ಮನೆಯಲ್ಲಿದ್ದಾನೆ, ರೆಡ್ಡಿ ರಾಜಕಾರಣ ಮುಗಿದಿದೆ ಅಂತ ಹೇಳಿಕೊಂಡಿದ್ದರು. ಇಂದಿನಿಂದ ನಾನು ಬೇಟೆ ಆರಂಭಿಸಿದ್ದೇನೆ. ಜಿಂಕೆಗಳು ಇನ್ನು ಮುಂದೆ ಮನೆ ಸೇರಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕನಕಗಿರಿ ಅಭ್ಯರ್ಥಿ ಘೋಷಣೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕನಕಗಿರಿ ಅಭ್ಯರ್ಥಿಯಾಗಿ ಡಾ. ಚಾರುಲ್ ವೆಂಕಟರಮಣ ಅವರ ಹೆಸರನ್ನು ರೆಡ್ಡಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಚುನಾವಣೆ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬಗ್ಗೆ ಅವರು ಸಂದೇಶ ರವಾನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!