ಹೊಸದಿಗಂತ ವರದಿ ಮಡಿಕೇರಿ:
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮದ ಬಗ್ಗೆ ಜಾರಕಿಹೊಳಿಯವರು ಅಲ್ಪ ಜ್ಞಾನದಿಂದ ಹೇಳಿಕೆ ನೀಡಿದ್ದು, ಇದು ಅವರ ಬೌದ್ಧಿಕ ಮಟ್ಟ ಹೇಗಿದೆ ಎಂಬುದನ್ನು ನಿರೂಪಿಸುತ್ತದೆ ಎಂದು ಟೀಕಿಸಿದ್ದಾರೆ.
ಭಾರತದ ಬಹುಸಂಖ್ಯಾತ ಧರ್ಮವಾಗಿರುವ ಹಿಂದು ಧರ್ಮದ ಹಿನ್ನೆಲೆ, ಇತಿಹಾಸದ ಬಗ್ಗೆ ಮಾತನಾಡುವ ಅರ್ಹತೆ ಸತೀಶ್ ಜಾರಕಿಹೊಳಿಯವರಿಗೆ ಇಲ್ಲ. ಹಿಂದುಗಳನ್ನೇ ಅವಮಾನಿಸಿರುವ ಅವರು ದೇಶದಲ್ಲಿರಲು ಯೋಗ್ಯರೂ ಅಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದುಕೊಂಡು ಅವರು ಈ ರೀತಿ ಹೇಳಿರುವುದರಿಂದ ಇದು ಪಕ್ಷದ ಅಧಿಕೃತ ಹೇಳಿಕೆಯೂ ಆಗಿರುತ್ತದೆ. ಈ ಬಗ್ಗೆ ಪಕ್ಷದ ರಾಜ್ಯ ನಾಯಕರು ತಮ್ಮ ನಿಲುವು ಏನೆಂಬುದನ್ನು ಬಹಿರಂಗಪಡಿಸಬೇಕೆಂದು ರವಿ ಕಾಳಪ್ಪ ಅವರು ಆಗ್ರಹಿಸಿದರು.
ಈ ರೀತಿಯ ಹೇಳಿಕೆಗಳನ್ನು ನೀಡಿ ಸಮಾಜ ಒಡೆಯುವ ಕಾರ್ಯವನ್ನು ಅವರು ಮಾಡುತ್ತಿದ್ದು, ಸತೀಶ್ ಜಾರಕಿಹೊಳಿ ಹಿಂದೂಗಳ ಹಾಗೂ ಈ ದೇಶದ ಜನರ ಬಳಿ ಬಹಿರಂಗ ಕ್ಷಮೆ ಯಾಚಿಸಬೇಕೆಂದೂ ರವಿ ಕಾಳಪ್ಪ ಒತ್ತಾಯಿಸಿದ್ದಾರೆ