ʻಕಾಂಗ್ರೆಸ್‌ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಪಾವಳಿ ಹಬ್ಬಕ್ಕೆ ವಿದ್ಯುತ್‌ ಕದ್ದು ಹೆಚ್.ಡಿ.ಕುಮಾರಸ್ವಾಮಿ ತಮ್ಮ ನಿವಾಸದ ದೀಪಾಲಂಕಾರಕ್ಕೆ ಬಳಕೆ ಮಾಡಿಕೊಂಡಿದ್ದಾರೆಂಬ ಕಾಂಗ್ರೆಸ್‌ ಆರೋಪಕ್ಕೆ ಜೆಡಿಎಸ್ ತಿರುಗೇಟು‌ ನೀಡಿದೆ.

ಈ ಕುರಿತು ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ಚಳಿಬಿಡಿಸಿದ ಜೆಡಿಎಸ್‌ ಘಟಕ ʻಕೊಳಕು ಮಂಡಲ ಕಾಂಗ್ರೆಸ್‌ಗೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕಳೆದೊಂದು ವಾರದಿಂದ ಕುಮಾರಸ್ವಾಮಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ʼಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಅವರ ಭಾನುವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಅದರ ನವರಂಧ್ರಗಳು ಆಸ್ಫೋಟಗೊಂಡಿವೆʼ ಎಂದು ವ್ಯಂಗ್ಯವಾಡಿದೆ.

ಮುಂದುವರಿದು..ಈಗ ಮಾರಿ ಉಳಿಸಿಕೊಳ್ಳಲು ಕರೆಂಟ್ ವೈರ್ ಮೊರೆ ಹೋಗಿದೆ ಕಾಂಗ್ರೆಸ್. ಗ್ಯಾರಂಟಿಗಳ ವೈಫಲ್ಯಕ್ಕೆ ದಿನ ಬೆಳಗಾದರೆ ಜನರಿಂದ ಕ್ಯಾಕರಿ ಉಗಿಸಿಕೊಳ್ಳುತ್ತಿರುವ ಆ ಪಕ್ಷ, ದಿಕ್ಕಿಲ್ಲದೆ ಅಪಾಯಕಾರಿ ಕರೆಂಟ್ ವೈರ್ ಹಿಡಿದುಬಿಟ್ಟಿದೆ. ದರಬೇಸಿ ಕಾಂಗ್ರೆಸ್ಸಿಗೆ ದಾರಿ ಕಾಣುತ್ತಿಲ್ಲ. ಉತ್ತರಪ್ರದೇಶದಲ್ಲಿ ಮೂರಂಕಿಗೆ ಕುಸಿದಿತ್ತು. ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಏದುಸಿರು ಬಿಡುತ್ತಿದೆ. ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳಕಳ್ಳವಾಗಿ ಪೋಸ್ಟರ್‌ ಅಂಟಿಸುವ ‘ಶಿಖಂಡಿ’ಸ್ಥಿತಿಗೆ ಬಂದಿದೆ. ಪಾಪ.. ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದೆ.

ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್‌ ವಿಕೃತಿ ಮಿತಿಮೀರಿದೆ. ಬೆಸ್ಕಾಂ ವಿದ್ಯುತ್‌ ವೇಗದಲ್ಲಿ ಎಫ್‌ ಐಆರ್‌ ದಾಖಲಿಸಿದೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನೂ ಮಾಡಿಲ್ಲ. ಈಡಿ, ಸಿಬಿಐ, ಐಟಿ ಅವರ ಬೆನ್ಹತ್ತಿಲ್ಲ. ಪುಡಿರೌಡಿ ‘ಕಿಡಿಗೇಡಿಕುಮಾರ’ನ ಕೈಚಳಕಕ್ಕೆ ಹೆದರುವ ಪ್ರಶ್ನೆಯೂ ಇಲ್ಲ.

ರಾಜ್ಯವನ್ನೇ ಗುಡಿಸಿ ಗುಂಡಾಂತರಿಸಿ ತಿಪ್ಪೆ ಸಾರಿಸಿದೆ ಲಜ್ಜೆಗೇಡಿ ಕಾಂಗ್ರೆಸ್. ಕಾಸಿಗಾಗಿ ಪೋಸ್ಟಿಂಗ್, ಸಿಎಂ ಕಚೇರಿಲಿ ಸುಲಿಗೆ, ಗುತ್ತಿಗೆದಾರರಿಂದ ಪರ್ಸಂಟೇಜ್, ಸ್ಟಾನ್ಲಿ ಸೋಫಾ-ಮಂಚ, ಹ್ಯುಬ್ಲೆಟ್‌ ವಾಚು.. ಒಂದಾ ಎರಡಾ? ಐಷಾರಾಮಯ್ಯನ ಮುಖ ಉಳಿಸಲು ಕರೆಂಟ್‌ ವೈರ್‌ ಹಿಡಿದು ಕೆಟ್ಟಿದೆ ಗುಜರಿ ಶಾಪ್ ಕಾಂಗ್ರೆಸ್! ಇನೊಬ್ಬರು ಹೇಳಿದ್ದನ್ನು ತಿರುಚಿ ವಕ್ರೀಕರಿಸುವ ‘ವಿಕೃತಿ ವಿಕಾರಪೀಡಿತʼ ಕಾಂಗ್ರೆಸ್ಸಿಗೆ, ಮಾಜಿ ಸಿಎಂ ಸ್ಪಷ್ಟನೆಗಿಂತ ನೀತಿಗೆಟ್ಟ ರಾಜಕಾರಣದಲ್ಲೇ ಹೆಚ್ಚು ನಂಬಿಕೆ. ಅದೇ ಅದರ ಧರ್ಮ. ಕಂಡ ಕಂಡವರ ಭೂಮಿಗೆ ಬೇಲಿ ಹಾಕುವ ‘ಕಿಡಿಗೇಡಿಕುಮಾರ’ನ ಪರ ಬ್ಯಾಟಿಂಗ್ ಬೀಸಿದ್ದು ಬಿಟ್ಟರೆ ಕೊಳಕುಮಂಡಲ ಕಾಂಗ್ರೆಸ್ ಕನ್ನಡಿಗರಿಗಾಗಿ ಕಿಸಿದಿದ್ದೇನೂ ಇಲ್ಲ ಎಂದು ಆರೋಪಿಸಿದೆ.

ಹಳ್ಳ ಹಿಡಿದ ಗ್ಯಾರಂಟಿಗಳು ಕಾಂಗ್ರೆಸ್ಸಿನಲ್ಲಿ ಹಾಲಾಹಲವನ್ನೇ ಸೃಷ್ಟಿಸಿವೆ ಎನ್ನುವುದಕ್ಕೆ ಕುಮಾರಸ್ವಾಮಿ ಅವರ ಮನೆಯ ಕರೆಂಟ್‌ ವೈರ್‌ ಕೊಟ್ಟ ಶಾಕೇ ಸಾಕ್ಷಿ. ರಾಜಕೀಯವಾಗಿ ಅವರನ್ನು ಎದುರಿಸಲಾಗದ ನರಸತ್ತ ಪಕ್ಷ, ಕರೆಂಟ್ ವೈರ್ ಹಿಡಿದು ‘ಶಕುನಿ ಯುದ್ಧ’ ಆರಂಭಿಸಿದೆ. ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ. ಕಂಬದ ಕರೆಂಟಿನ ಬಗ್ಗೆ ಕಾಂಗ್ರೆಸ್ ಈ ಪರಿ ಕೈಕೈ ಹಿಚುಕಿಕೊಳ್ಳುತ್ತಿರುವುದನ್ನು ನೋಡಿದರೆ ವೈರಿನಲ್ಲಿಯೂ ನರಿ ರಾಜಕೀಯ ದಿಟವೆನಿಸುತ್ತದೆ. ಕುಮಾರಸ್ವಾಮಿ ಅವರ ಒಂದೇ ಒಂದು ಕ್ಷಿಪಣಿ ಸಾಕು, ಕಾಂಗ್ರೆಸ್ ‌’ರಕ್ಕಸ ರಿಪಬ್ಲಿಕ್’ ಉಡೀಸ್ ಆಗಲಿಕ್ಕೆ. ಶಿಖಂಡಿ ಅಂತ್ಯಕಾಲ ಆರಂಭವಾಗಿದೆ ಎಂದು ವಾಗ್ಧಾಳಿ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!