ಹೊಸದಿಗಂತ ವರದಿ, ಕುಮಟಾ:
ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ತೆರೆದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಕಳ್ಳತನ ನಡೆಸಿದ ಮೂವರು ಮಹಿಳಾ ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಅತ್ತಿಬೆಲೆಯ ಆನೆಕಲ್ ರೋಡ್ನ ಮಾರಿಯಮ್ಮ ದೇವಸ್ಥಾನದ ಸಮೀಪದ ನಿವಾಸಿಗಳಾದ ಆದಿಯಮ್ಮ ತಿರುಪತಿ(೪೨), ವೆಂಕ್ಟಮ್ಮ ತಿರುಪತಿ, ಲಲಿತಾ ನಾಗರಾಜ (೩೨) ಬಂಧಿತ ಮಹಿಳಾ ಆರೋಪಿಗಳಾಗಿದ್ದಾರೆ. ಈ ಮೂವರು ಸೇರಿ ಕುಮಟಾ ಪಟ್ಟಣದಲ್ಲಿ ಮಹಿಳೆಯೋರ್ವಳು ಬಸ್ ಹತ್ತುವಾಗ ಬ್ಯಾಗ್ ಜಿಪ್ ತೆರೆದು ಅದರಲ್ಲಿದ್ದ ಸುಮಾರು ೧೨೪ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ೫೦ ಸಾವಿರ ನಗದು ಕಳ್ಳತನ ನಡೆಸಿದ್ದರು. ಇದರ ಕುರಿತು ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು, ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿ, ಎಲ್ಲ ಬಂಗಾರದ ಆಭರಣಗಳನ್ನು ಮತ್ತು ೬೦೩೦ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಪಿ.ಐ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪಿ.ಎಸ್.ಐಗಳಾದ ನವೀನ ನಾಯ್ಕ, ಪದ್ಮಾ ದೇವಳಿ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.