ಹೊಸದಿಗಂತ ಡಿಜಿಟಲ್ ಡೆಸ್ಕ್:
ದಲಿತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯದಿದ್ದರೆ ಗುಜರಾತ್ ಬಂದ್ ಮಾಡುವುದಾಗಿ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಗುಜರಾತ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಅಸ್ಸಾಂನಿಂದ ಬಿಡುಗಡೆಯಾಗಿ ಬಂದ ಬಳಿಕ ವಡಾಜ್ ಪ್ರದೇಶದ ರಾಮ್ದೇವ್ ಪಿರ್ ನೋ ಟೆಕ್ರೋದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೇವಾನಿ “2016ರ ಉನಾ ಪ್ರತಿಭಟನೆಯ ಸಂದರ್ಭದಲ್ಲಿ ದಲಿತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದಲ್ಲಿ ಜೂನ್ 1 ರಂದು ಗುಜರಾತ್ ಬಂದ್ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
“ಪಾಟಿದಾರ್ ಆಂದೋಲನಕ್ಕೆ ಸಂಬಂಧಿಸಿದಂತೆ ಪಾಟಿದಾರರರ ಮೇಲೀನ ಪ್ರಕರಣಗಳನ್ನು ವಾಪಸ್ ಪಡೆದಂತೇ ದಲಿತರ ಮೇಲಿನ ಪ್ರಕರಣಗಳನ್ನುವಾಪಸ್ ಪಡೆಯಬೆಕು. ಪಾಟಿದಾರರ ಕೇಸ್ ಗಳನ್ನು ವಾಪಸ್ ಪಡೆದಿರುವುದಕ್ಕೆ ನಮ್ಮ ಬೆಂಬಲವಿದೆ. ಒಂದು ವೇಳೆ ಸರ್ಕಾರ ಹಿಂಪಡೆಯಲಿಲ್ಲವೆಂದರೆ ಗುಜರಾತ್ ಬಂದ್ ಮಾಡಲಾಗುತ್ತದೆ” ಎಂದಿದ್ದಾರೆ.
ಈ ಸಮಾವೇಶವು ಕಾಂಗ್ರೆಸ್ ನಿಂದ ಆಯೋಜನೆಯಾಗಿದ್ದು ಹಲವು ಕಾಂಗ್ರೆಸ್ ಮುಖಂಡರೂ ಕೂಡ ಭಾಗಿಯಾಗಿದ್ದರು ಎಂದು ಮೂಲಗಳು ವರದಿ ಮಾಡಿವೆ.