June 1, 2026
Monday, June 1, 2026
spot_img

ಜಿಹಾದ್ ಜಾಲದ ಸುಳಿವು: ಯುವಕರಿಗೆ ತರಬೇತಿ, ರಾಜಕೀಯ ನಾಯಕರೇ ಟಾರ್ಗೆಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಭದ್ರತೆಗೆ ಸಂಬಂಧಿಸಿದಂತೆ ಆತಂಕ ಹುಟ್ಟಿಸಿರುವ ಪ್ರಕರಣವೊಂದರಲ್ಲಿ, ಕೆಲ ಯುವಕರಿಗೆ ಸಂಘಟಿತ ರೀತಿಯಲ್ಲಿ ತರಬೇತಿ ನೀಡಲಾಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಪಶ್ಚಿಮ ಉತ್ತರ ಪ್ರದೇಶದಿಂದ ಪೂರ್ವಾಂಚಲ್‌ವರೆಗೆ ಹಲವರನ್ನು ಸೇರಿಸಿಕೊಂಡು ಪ್ರಮುಖ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.

ರಾಜಕೀಯ ನಾಯಕರು, ಕಚೇರಿಗಳ ಮೇಲೆ ದಾಳಿ ಸಂಚು?

ತನಿಖಾ ಮೂಲಗಳ ಪ್ರಕಾರ, ಕೆಲವು ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಹಾಗೂ ರಾಜಕೀಯ ಪಕ್ಷಗಳ ಕಚೇರಿಗಳ ಮೇಲೆ ಸ್ಫೋಟಕ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಭದ್ರತಾ ಪಡೆಗಳ ಚಟುವಟಿಕೆಗಳ ಮೇಲೂ ನಿಗಾ ಇಡಲಾಗುತ್ತಿತ್ತು ಎಂಬ ಮಾಹಿತಿ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ.

ಇದನ್ನೂ ಓದಿ:

ವಾಟ್ಸಾಪ್ ಮೂಲಕ ವಿದೇಶಿ ಸಂಪರ್ಕ ಪತ್ತೆ

ಗುಪ್ತಚರ ಮಾಹಿತಿ ಹಾಗೂ ಎಲೆಕ್ಟ್ರಾನಿಕ್ ಕಣ್ಗಾವಲಿನ ವೇಳೆ ಉತ್ತರ ಪ್ರದೇಶದ ಅಜಮ್‌ಗಢ ಜಿಲ್ಲೆಯ ನಿವಾಸಿಯೊಬ್ಬನಿಗೆ ಸಂಬಂಧಿಸಿದ ಮಹತ್ವದ ಸುಳಿವು ಸಿಕ್ಕಿದೆ. ಪಾಕಿಸ್ತಾನ ಮತ್ತು ದುಬೈ ಮೂಲದ ಮೊಬೈಲ್ ಸಂಖ್ಯೆಗಳ ಮೂಲಕ ವಾಟ್ಸಾಪ್ ಸಂಪರ್ಕ ಹೊಂದಿದ್ದ ಆರೋಪ ಕೇಳಿಬಂದಿದ್ದು, ಈ ಜಾಲದ ಹಿಂದೆ ವಿದೇಶಿ ಆಧಾರಿತ ಗುಂಪಿನ ಕೈವಾಡವಿದೆ ಎಂಬ ಅನುಮಾನ ಮೂಡಿದೆ.

ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದ ಆರೋಪ

ತನಿಖೆಯಲ್ಲಿ ಕೆಲ ವ್ಯಕ್ತಿಗಳು ಜಿಹಾದ್ ಕುರಿತ ಚರ್ಚೆ ನಡೆಸುತ್ತಿದ್ದರು ಹಾಗೂ ಇತರರನ್ನು ಸಂಘಟನೆಯೊಂದಿಗೆ ಕೈಜೋಡಿಸಲು ಪ್ರೇರೇಪಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ವಿದೇಶದಲ್ಲಿರುವ ಕೆಲವು ಶಂಕಿತರಿಂದ ನಿರಂತರ ನಿರ್ದೇಶನಗಳು ಬರುತ್ತಿದ್ದವು ಎನ್ನುವ ಅಂಶವೂ ತನಿಖೆಯಲ್ಲಿ ಬಹಿರಂಗವಾಗಿದೆ.

ಎಟಿಎಸ್ ತನಿಖೆ ತೀವ್ರ, ಮತ್ತಷ್ಟು ಮಾಹಿತಿ ನಿರೀಕ್ಷೆ

ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಉಗ್ರ ನಿಗ್ರಹ ದಳ (ಎಟಿಎಸ್) ತನಿಖೆಯನ್ನು ಮತ್ತಷ್ಟು ವಿಸ್ತರಿಸಿದೆ. ದೇಶದ ಭದ್ರತೆಗೆ ಧಕ್ಕೆಯಾಗುವ ಯಾವುದೇ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !