ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಕೃತಕಬುದ್ಧಿಮತ್ತೆ(AI) ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಎಲ್ಲೆಡೆ ಇದು ಜನಪ್ರಿಯತೆಗಳಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದರ ಸಾಮರ್ಥ್ಯವು ವಿಸ್ತರಿಸಿದಂತೆಲ್ಲ ಇದು ಮಾನವ ಉದ್ಯೋಗಗಳಿಗೇ ಕುತ್ತಾಗಿ ಪರಿಣಮಿಸಲಿದೆ ಎಂಬ ಕುರಿತು ಚರ್ಚೆಯಾಗುತ್ತಿದೆ. ಇದೀಗ ಚೆನ್ನೈ ಮೂಲದ ಜಾಗತಿಕ ಟೆಕ್ ಕಂಪನಿ ಜೋಹೋದ ಮುಖ್ಯಸ್ಥ ಶ್ರೀಧರ ವೆಂಬು ಕೃತಕ ಬುದ್ಧಿಮತ್ತೆ ಯ ಕುರಿತು ಕಳವಳ ವ್ಯಕ್ತಪಡಿಸಿದ್ದು ಇದು ಪ್ರೋಗ್ರಾಮಿಂಗ್ ಉದ್ಯೋಗಳಿಗೆ ಗಂಭೀರ ಅಪಾಯವನ್ನು ತಂದೊಡ್ಡಲಿದೆ ಎಂದಿದ್ದಾರೆ.
ಪ್ರಸ್ತುತ ಜಾಗತಿಕವಾಗಿ ಚಾಲ್ತಿಯಲಿರುವ ಚಾಟ್ಜಿಪಿಟಿ ಮತ್ತು ಇತರ ಸಂಭಾಷಣಾ ಎಐ ಪ್ಲಾಟ್ಫಾರ್ಮ್ಗಳನ್ನು ಉಲ್ಲೇಖಿಸಿದ ವೆಂಬು “ಇಂದು ರಚಿಸಲಾಗುತ್ತಿರುವ ಚಾಟ್ಜಿಪಿಟಿ, ಜಿಪಿಟಿ 4 ಮತ್ತು ಇತರ ಎಐ ಅನೇಕ ಪ್ರೋಗ್ರಾಮರ್ಗಳ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. AI ಯ ಧನಾತ್ಮಕ ಉಪಯೋಗಗಳಿದ್ದರೂ, ಈ ತಂತ್ರಜ್ಞಾನದ ಸಂಕೀರ್ಣತೆ ಮತ್ತು ಆಳವು ಕಳವಳಕಾರಿಯಾಗಿದೆ” ಎಂದಿದ್ದಾರೆ.
ಕೃತಕ ಬುದ್ಧಿಮತ್ತೆಯಿಂದಾಗಬಹುದಾದ ತಂತ್ರಜ್ಞಾನ ಪರಿಣಾಮಗಳ ಹೊರತಾಗಿ ಇದರಿಂದ ಅನೇಕ ಆರ್ಥಿಕ ಅಪಾಯಗಳೂ ಎದುರಾಗುತ್ತವೆ ಎಂದು ಶ್ರೀಧರ ವೆಂಬು ಉಲ್ಲೇಖಿಸಿದ್ದು ಕೃತಕ ಬುದ್ಧಿಮತ್ತೆಯು ಮುಂದಿನ ದಿನಗಳಲ್ಲಿ ಬಹುತೇಕ ಉದ್ಯೋಗಳ ಸ್ಥಾನವನ್ನು ಆಕ್ರಮಿಸಿದರೆ ಇದರಿಂದ ಬಹಷಳಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇದು ನಮ್ಮ ಆರ್ಥಿಕತೆಯ ಮೇಲೆ ಅತ್ಯಂತ ಗಂಭೀರವಾದ ಪರಿಣಾಮ ಬೀರುತ್ತದೆ. ನಮ್ಮ ಅಗತ್ಯತೆಗಳಲ್ಲಿ ಬಹುತೇಕ ಸೇವೆಗಳನ್ನು ಮಾನವರಹಿತವಾಗಿ ನಿರ್ವಹಿಸದರೆ ಮಾನವರೇನು ಮಾಡಬೇಕು?” ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಕೃತಕಬುದ್ಧಿಮತ್ತೆ (AI) ಕುರಿತು ನಿರ್ದಿಷ್ಟ ಚೌಕಟ್ಟು ರೂಪಿಸುವಂತೆ ವೆಂಬು ಇತರ ಇಬ್ಬರು ಉದ್ಯಮಿಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಟ್ವೀಟ್ ಮಾಡಿದ್ದಾರೆ.