ಹೊಸದಿಗಂತ ವರದಿ, ಕಲಬುರಗಿ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವರ ಅವಧಿಯನ್ನು ಜೂನ್ ೨೦೨೪ ರವರೆಗೆ ವಿಸ್ತರಿಸಿದ ನಂತರ ಕಲಬುರಗಿ ಜಿಲ್ಲೆಗೆ ಪ್ರಥಮವಾಗಿ ಆಗಮಿಸಿದ ಅವರನ್ನು ಆತ್ಮೀಯವಾಗಿ ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು, ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣಗೌಡ ಬರಮಾಡಿಕೊಂಡರು. ನಂತರ ವಿಮಾನ ನಿಲ್ದಾಣದ ಒಳಗೆ ಕಾದು ನಿಂತಿದ್ದ ಪಕ್ಷದ ಶಾಸಕರು, ಪದಾಧಿಕಾರಿಗಳನ್ನು ಭೇಟಿ ಮಾಡಿ ಪಕ್ಷವನ್ನು ಹೆಚ್ಚು ಸಂಘಟಿಸುವಂತೆ ಕರೆ ನೀಡಿದರು.
ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್, ಸಿದ್ದಾಜಿ ಪಾಟೀಲ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಸುಭಾಷ್ ಗುತ್ತೇದಾರ್, ಡಾ. ಅವಿನಾಶ್ ಜಾಧವ್, ಬಸವರಾಜ್ ಮತ್ತಿಮುಡ್, ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ್ ದೋಣಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರವೀಣ್ ತೆಗನೂರ್, ಶ್ರೀನಿವಾಸ್ ದೇಸಾಯಿ, ಉಪಾಧ್ಯಕ್ಷ ಶಿವ ಅಷ್ಠಗಿ, ಕಾರ್ಯಕಾರಣಿ ಸದಸ್ಯ ಪ್ರೀತಂ ಪಾಟೀಲ್ ಸೇರಿದಂತೆ ಅನೇಕರು ಶುಭಾಶಯಗಳು ತಿಳಿಸಿದರು.