ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣೆಗೆ (Karnataka Election) ಸಕಲ ಸಿದ್ಧತೆ ನಡೆಯುತ್ತಿದ್ದು, ಇನ್ನು ಕೆಲವೇ ತಿಂಗಳು ಇದ್ದು ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಶೃಂಗೇರಿಗೆ ಭೇಟಿ ನೀಡಲಿದ್ದಾರೆ.
ಶೃಂಗೇರಿ ಮಠದ ಜಗದ್ಗುರುಗಳ ಭೇಟಿಗೆ ನಡ್ಡಾ (J P Nadda) ಅವರು ಅವಕಾಶ ಕೇಳಿದ್ದಾರೆ.
ಶೃಂಗೇರಿ ಮಠ ಒಡೆದ ಬ್ರಾಹ್ಮಣ ಸಮುದಾಯದವರನ್ನು ರಾಜ್ಯದಲ್ಲಿ ಸಿಎಂ ಮಾಡಲು ಆರ್ಎಸ್ಎಸ್ ಹುನ್ನಾರ ನಡೆಸಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬೆನ್ನಲ್ಲೇ ಜೆ.ಪಿ.ನಡ್ಡಾ ಶೃಂಗೇರಿ ಮಠಕ್ಕೆ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಫೆ. 20ರಂದು ಕೊಪ್ಪ ಪಟ್ಟಣದಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಲು ಜೆ.ಪಿ.ನಡ್ಡಾ ಜಿಲ್ಲೆಗೆ ಆಗಮಿಸಲಿದ್ದಾರೆ. ಸಮಾವೇಶದ ನಂತರ ಸಂಜೆ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಶಾರದಾ ದೇವಿ ದರುಶನ ಪಡೆಯಲಿದ್ದಾರೆ. ಈ ವೇಳೆ ಶೃಂಗೇರಿಯ ದೇವಾಲಯದ ವಿವಿಐಪಿ ಗೆಸ್ಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿರುವ ಜೆಪಿ ನಡ್ಡಾ ಅವರು, ಶೃಂಗೇರಿ ಮಠದ ಶ್ರೀಗಳನ್ನು ಭೇಟಿಯಾಗಲು 20 ಕಾಲಾವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಶೃಂಗೇರಿ ಮಠ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.