ಪ್ರತಿ ಬಾರಿ ಜುಲೈ 25 ರಂದೇ ಭಾರತದ ರಾಷ್ಟ್ರಪತಿಗಳ ಪ್ರಮಾಣ ವಚನ..ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿ ಬಾರಿಯೂ ಜುಲೈ 25 ರಂದು ಭಾರತದ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ನಡೆಯುತ್ತದೆ. ಇಂಥದ್ದೇ ದಿನ ಪ್ರಮಾಣ ವಚನ ಸ್ವೀಕಾರ ನಡೆಯಬೇಕೆಂದು ಯಾವ ನಿಯಮವೂ ಇಲ್ಲ, ಆದರೆ 1977ರಿಂದ ಈ ದಿನಾಂಕದಂದೇ ಪ್ರಮಾಣ ವಚನ ಸಮಾರಂಭ ನಡೆದಿರುವುದನ್ನು ನಾವು ಗಮನಿಸಬಹುದು. ಮೊದಲ ಬಾರಿಗೆ, ದೇಶದ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರು 25 ಜುಲೈ 1977 ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ನಂತರ ಅಧಿಕಾರ ವಹಿಸಿಕೊಂಡ ಜ್ಞಾನಿ ಜೈಲ್‌ಸಿಂಗ್‌ನಿಂದ ಹಿಡಿದು ನಿನ್ನೆ ನಿರ್ಗಮಿತರಾದ ರಾಮನಾಥ್ ಕೋವಿಂದ್‌ವರೆಗೆ ಎಲ್ಲರೂ ಇದೇ ದಿನಾಂಕದಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಜನವರಿ 26, 1950 ರಂದು ಡಾ.ರಾಜೇಂದ್ರ ಪ್ರಸಾದ್ ಅವರು ದೇಶದ ಪ್ರಥಮ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿ, ಎರಡನೇ ಅವಧಿಗೂ ಅವರೇ ಮುಂದುವರಿದರು. ನಂತರ1962ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗಿ ಅಧಿಕಾರ ನಡೆಸಿದರು. ಆದರೆ ಆ ನಂತರ ರಾಷ್ಟ್ರಪತಿ ಹುದ್ದೆಗೆ ಬಂದ ಕೆಲವರು ಪೂರ್ಣಾವಧಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಮೇ 13, 1967 ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ.ಜಾಕಿರ್ ಹುಸೇನ್, ನಂತರ ಫಕ್ರುದ್ದೀನ್ ಅಲಿ ಅಹಮದ್ ಕೂಡ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಮುನ್ನವೇ ಮೃತಪಟ್ಟರು.

ಬಳಿಕ ನೀಲಂ ಸಂಜೀವ ರೆಡ್ಡಿ ಅವರು ಜುಲೈ 25, 1977 ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿದರು. ಹಾಗಾಗಿಯೇ ಅಂದಿನಿಂದ ನಿನ್ನೆ ನಿರ್ಗಮಿತರಾದ ರಾಮನಾಥ್‌ ಕೋವಿಂದ್‌ವರೆಗೆ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದವರೆಲ್ಲಾ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಜುಲೈ 25 ರಂದು ಅಧಿಕಾರ ವಹಿಸಿಕೊಳ್ಳುವುದು. ಐದು ವರ್ಷಗಳ ನಂತರ ಜುಲೈ 24 ರಂದು ಅಧಿಕಾರದಿಂದ ಕೆಳಗಿಳಿಯುವುದು ರೂಢಿಯಾಗಿದೆ. ಈ ದಿನಾಂಕದಂದು ಇಲ್ಲಿಯವರೆಗೆ ಒಂಬತ್ತು ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೊಸದಾಗಿ ಚುನಾಯಿತರಾದ ದ್ರೌಪದಿ ಮುರ್ಮು ಕೂಡ ಇದೇ ದಿನಾಂಕದಂದು ಅಧಿಕಾರ ವಹಿಸಿಕೊಂಡಿದ್ದು, ಈ ಪಟ್ಟಿಗೆ ಸೇರುವ 10 ನೇ ವ್ಯಕ್ತಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!