ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 25 ರಂದು ‘ಸಂವಿಧಾನದ ಹತ್ಯಾ ದಿವಸ’ ಎಂದು ಆಚರಿಸುವುದು ಸಂವಿಧಾನವನ್ನು ತುಳಿದು ಹಾಕಿದಾಗ ಏನೆಲ್ಲ ಸಂಭವಿಸಿತು ಎಂಬುದನ್ನು ನೆನಪಿಸುವ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯ ಘೋಷಣೆಯ ಕರಾಳ ದಿನದ ಸ್ಮರಣಾರ್ಥ ಇಂದು ಪ್ರತಿ ವರ್ಷ ಜೂನ್ 25ರಂದು ಸಂವಿಧಾನ ಹತ್ಯಾ ದಿನ ಎಂದು ಆಚರಿಸುವುದಾಗಿ ಘೋಷಿಸಿದೆ.
ಈ ಕುರಿತು ಮಾತನಾಡಿದ ಮೋದಿ, “ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ್ ಎಂದು ಆಚರಿಸುವುದು ಭಾರತದ ಸಂವಿಧಾನವನ್ನು ತುಳಿದು ಹಾಕಿದಾಗ ಏನಾಗುತ್ತದೆ ಎಂಬುದನ್ನು ನೆನಪಿಸುತ್ತದೆ. ಇದು ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಲ್ಲಿಸುವ ದಿನವಾಗಿದೆ. ತುರ್ತು ಪರಿಸ್ಥಿತಿಯು ಮಿತಿಮೀರಿದ ಕಾಂಗ್ರೆಸ್ ಭಾರತೀಯ ಇತಿಹಾಸದ ಕರಾಳ ಹಂತವನ್ನು ಬಿಚ್ಚಿಟ್ಟಿತು ಎಂದಿದ್ದಾರೆ.
ಘೋಷಣೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಸಂವಿಧಾನ ಹತ್ಯಾ ದಿವಸ್’ ಆಚರಣೆಯು ಪ್ರತಿಯೊಬ್ಬ ಭಾರತೀಯನಲ್ಲೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಶಾಶ್ವತ ಜ್ವಾಲೆಯನ್ನು ಜೀವಂತವಾಗಿಡಲು ಸಹಾಯ ಮಾಡುತ್ತದೆ, ಹೀಗಾಗಿ ಕಾಂಗ್ರೆಸ್ನಂತಹ ಸರ್ವಾಧಿಕಾರಿ ಶಕ್ತಿಗಳು ಹಾಗೂ ಆ ಭಯಾನಕ ದಿನಗಳು ಪುನರಾವರ್ತನೆಯಾಗದಂತೆ ತಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಇಂದಿರಾ ಗಾಂಧಿಯವರ ಸರ್ಕಾರವು ಜೂನ್ 25, 1975ರಂದು ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಸುಮಾರು 2 ವರ್ಷಗಳ ನಂತರ ಮಾರ್ಚ್ 21, 1977ರಂದು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲಾಯಿತು. ಜೂನ್ 25, 2024ರಂದು ತುರ್ತು ಪರಿಸ್ಥಿತಿಯ 50 ವರ್ಷಗಳ ನೆನಪಿಗಾಗಿ ಕರಾಳದಿನವನ್ನು ಆಚರಿಸಲಾಯಿತು.