ಹೊಸದಿಗಂತ ವರದಿ ಸೋಮವಾರಪೇಟೆ:
ಇಲ್ಲಿಗೆ ಸಮೀಪದ ಬೇಳೂರು ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಶುಕ್ರವಾರ ಮುಂಜಾನೆ ಗ್ರಾಮದ ನಿವಾಸಿ ಶ್ರೀಕಂಠ ಎಂಬವರ ಮನೆಯ ಹಿಂಭಾಗದ ತೋಟಕ್ಕೆ ದಾಳಿಯಿಟ್ಟ ಒಂಟಿ ಆನೆ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿದೆ.
ಮನೆಯ ಹಿಂದೆ ಆಗುತ್ತಿದ್ದ ಶಬ್ಧಕ್ಕೆ ಎಚ್ಚರಗೊಂಡ ಶ್ರೀಕಂಠ ಹೊರಗೆ ಬಂದು ನೋಡುತ್ತಿದ್ದ ಸಂದರ್ಭ ಅವರ ಮೇಲೆಯೂ ಆನೆ ದಾಳಿ ನಡೆಸಲು ಮುಂದಾಗಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಅಕ್ಕಪಕ್ಕದ ಮನೆಗಳ ಆವರಣಕ್ಕೂ ನುಗ್ಗಿರುವ ಆನೆ ದನ ಕರುಗಳಿಗೆ ಸಂಗ್ರಹಿಸಿಟ್ಟಿದ್ದ ಹುಲ್ಲನ್ನು ತಿಂದು ನಾಶ ಮಾಡಿದೆ. ಮತ್ತೊಂದು ಮನೆಯ ನೀರಿನ ಟ್ಯಾಂಕನ್ನು ಒಡೆದು ಹಾಕಿದೆ.
ಇತ್ತೀಚೆಗೆ ಬೇಳೂರು ಸುತ್ತಮುತ್ತಲಿನಲ್ಲಿ ದಿನನಿತ್ಯ ಆನೆಗಳು ಓಡಾಡುತ್ತಿರುವುದರಿಂದ ಭಯದಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ