May 14, 2026
Thursday, May 14, 2026
spot_img

ಕರ್ತವ್ಯಕ್ಕೆ ಹಾಜರಾದ ‘ಕೈ’ ಶಾಸಕರು: ವಿಧಾನಸೌಧದಲ್ಲಿ ಅದ್ಧೂರಿ ಪದಗ್ರಹಣ ಸಮಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಬಾಗಲಕೋಟೆ ಕ್ಷೇತ್ರದ ಉಮೇಶ್ ಮೇಟಿ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಅವರು ಇಂದು ಅಧಿಕೃತವಾಗಿ ಶಾಸಕರಾಗಿ ಪದಗ್ರಹಣ ಮಾಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಸನಬದ್ಧ ಸಮಾರಂಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ನೂತನ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಉಮೇಶ್ ಮೇಟಿ ಮತ್ತು ಸಮರ್ಥ್ ಶಾಮನೂರು ಅವರಿಗೆ ಸಭಾಧ್ಯಕ್ಷರು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಜನಸೇವೆಯ ಹಾದಿಗೆ ಶುಭ ಹಾರೈಸಿದರು.

ಈ ರಾಜಕೀಯ ಮಹತ್ವದ ಕ್ಷಣಕ್ಕೆ ರಾಜ್ಯದ ಪ್ರಭಾವಿ ನಾಯಕರು ಸಾಕ್ಷಿಯಾದರು. ವೇದಿಕೆಯ ಮೇಲೆ ಸಚಿವರಾದ ಸತೀಶ್ ಜಾರಕಿಹೊಳಿ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಉಪಸ್ಥಿತರಿದ್ದು, ನೂತನ ಶಾಸಕರಿಗೆ ಹೂಗುಚ್ಛ ನೀಡಿ ಶುಭ ಕೋರಿದರು.

ವಿಧಾನಸಭೆಯ ಕಾರ್ಯದರ್ಶಿಗಳಾದ ಎಂ.ಕೆ. ವಿಶಾಲಾಕ್ಷಿ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದಲೇ ಉಮೇಶ್ ಮೇಟಿ ಹಾಗೂ ಸಮರ್ಥ್ ಶಾಮನೂರು ಅವರು ಶಾಸನಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಅಧಿಕೃತ ಅರ್ಹತೆ ಪಡೆದಿದ್ದಾರೆ. ತಮ್ಮ ನೆಚ್ಚಿನ ನಾಯಕರು ಶಾಸಕರಾಗಿ ಅಧಿಕಾರ ಸ್ವೀಕರಿಸಿದ್ದನ್ನು ಕಂಡು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ವಿಧಾನಸೌಧದ ಆವರಣದಲ್ಲಿ ಸಂಭ್ರಮಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !