ಹೊಸದಿಗಂತ ವರದಿ, ಕಲಬುರಗಿ
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಜಾಡುಹತ್ತಿ ಸಿಐಡಿ ಪೊಲೀಸರ ತಂಡವು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಕಳೆದ ಒಂದು ವಾರದಿಂದ ಕಲಬುರಗಿಯಲ್ಲಿ ಬಿಡು ಬಿಟ್ಟಿರುವ ಸಿಐಡಿ ತಂಡವು ಬಂಧಿತ ಆರೋಪಿಗಳನ್ನು ಪರೀಕ್ಷಾ ಕೇಂದ್ರವಾಗಿದ್ದ ಜ್ಞಾನ ಜ್ಯೋತಿ ಇಂಗ್ಲಿಷ್ ಮಿಡಿಯಂ ಶಾಲೆಗೆ ಸೋಮವಾರ ಬೆಳಿಗ್ಗೆ ಕರೆದುಕೊಂಡು ಬಂದಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಹೇಗೆಲ್ಲಾ ಅಕ್ರಮ ನಡೆದಿದೆ. ಯಾರೆಲ್ಲಾ ಸಹಕಾರ ನೀಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಕಲಬುರಗಿ ನಗರದ ಜಿಡಿಎ ಬಡಾವಣೆಯಲ್ಲಿ ಇರುವ ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಗೆ ಕರೆದುಕೊಂಡು ಬಂದಿದ್ದಾರೆ. ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿದ್ದ ಶಾಲೆ ಇದಾಗಿದೆ. ಇಲ್ಲಿಯವರೆಗೆ ಎಂಟು ಜನ ಆರೋಪಿಗಳನ್ನು ಸಿಐಡಿ ತಂಡವು ಬಂಧನ ಮಾಡಿದೆ.
ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ ಸಿಐಡಿ ಇನ್ಸಪೆಕ್ಟರ್ ದಿಲೀಪ್ ನೇತೃತ್ವದ ತಂಡ ಭೇಟಿ ನೀಡಿ, ಶಾಲೆಯಲ್ಲಿನ ಕೆಲ ಮಾಹಿತಿಗಳನ್ನು ಸಂಗ್ರಹಿಸಿ ತೆರಳಿದ್ದಾರೆ. ತದ ನಂತರ ಬಂಧಿತ ಆರೋಪಿಗಳನ್ನು ಶಾಲೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಇನ್ನೂ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಬಂಧಿತರಲ್ಲಿ ಪ್ರವೀಣ್ ಕುಮಾರ್ ಕೆ, ಚೇತನ ನಂದಗಾಂವ್, ಅರುಣ ಪಾಟೀಲ್ ಎಂಬುವವರು ಅಭ್ಯರ್ಥಿಗಳಾಗಿದ್ದು, ಜ್ಞಾನ ಜ್ಯೋತಿ ಶಾಲೆಯ ಮೂರು ಜನ ಮೇಲ್ವಿಚಾರಕರಾದ ಸುಮಾ, ಸಿದ್ದಮ್ಮಾ ಹಾಗೂ ಸಾವಿತ್ರಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳು ಪರೀಕ್ಷೆ ಬರೆದ ಸ್ಥಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇತ್ತ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ, ಇಬ್ಬರು ಮೇಲ್ವಿಚಾರಕರು ಸಹ ನಾಪತ್ತೆ ಯಾಗಿದ್ದು ಅವರ ಪತ್ತೆಗಾಗಿ ಶೋಧಕಾರ್ಯ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ