ಹೊಸದಿಗಂತ ವರದಿ ಕಲಬುರಗಿ:
ಅಮರನಾಥದಲ್ಲಿ ಸಂಭವಿಸಿದ ಮೇಘಸ್ಪೋಟ ಸಂಭವಿಸಿದ್ದು, ಶಿವಲಿಂಗ ದಶ೯ನಕ್ಕೆಂದು ತೆರಳಿದ ಕಲಬುರಗಿ ಜಿಲ್ಲೆಯ 11 ಜನರು ಅಮರನಾಥನ ಬಾರಟಲ್ ಕ್ಯಾಂಪ್ ನಲ್ಲಿ ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ. ಯಾತ್ರೆಗೆ ತೆರಳಿದ್ದ 11 ಜನರು ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ನಿವಾಸಿಗಳಾಗಿದ್ದು, ಜುಲೈ 3 ರಂದು ಕಲಬುರಗಿಯಿಂದ ಅಮರನಾಥ ಯಾತ್ರೆ ಕೈಗೊಂಡಿದ್ದರು.
ಶುಕ್ರವಾರ ಸಂಜೆ ಅಮರನಾಥ ಶಿವಲಿಂಗ ದಶ೯ನ ಪಡೆದ ಎಲ್ಲರೂ ಹೆಚ್ಚಿನ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಒಗ್ಗೂಡಿ ನಡೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸೇರಿದ್ದಾರೆ ಎಂದು ಅವರವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಇನ್ನೊಂದೆಡೆ ಕಲಬುರಗಿ ತಾಲೂಕಿನ ಬಬಲಾದ್ ಕ್ಷೇತ್ರದ ಶ್ರೀಗಳಾದ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು ಸಹ ಕಳೆದ ಅಮರನಾಥ ಶಿವಲಿಂಗ ದಶ೯ನ ಪಡೆಯಲು ತೆರಳಿದ್ದು, ಶ್ರೀಗಳು ಸುರಕ್ಷಿತವಾಗಿರುವುದಾಗಿ ಮಠದ ಮೂಲಗಳು ತಿಳಿಸಿವೆ.