ಸ್ವಾತಂತ್ರ್ಯಕ್ಕಾಗಿ ಜನ್ಮತಾಳಿದ ಕನ್ನಡದ ಮೊದಲ ವೀರ ಪತ್ರಿಕೆ

ಶ್ರೀಹರಿ ಕಲಕೋಟಿ

ಶಿಕ್ಷಣ ಮತ್ತು ಸಂಸ್ಕೃತಿಯ ನೆಲೆಯಾಗಿರುವ ಧಾರವಾಡ, ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ರಾಷ್ಟ್ರೀಯ ಪ್ರಜ್ಞೆ ಸೃಷ್ಟಿಸಲು, ಬ್ರಿಟಿಷರ ದಮನಕಾರಿ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಹಲವರು ಪ್ರಮುಖ ಪಾತ್ರ ವಹಿಸಿದರು.

ಆರಂಭದಲ್ಲಿ ‘ಧಾರವಾಡ ವೃತ್ತ’ ಮತ್ತು ‘ಚಾವ’ ಎಂಬ ಎರಡು ಮರಾಠಿ ಸುದ್ದಿ ಪತ್ರಿಕೆಗಳು, ಧಾರವಾಡದಲ್ಲಿ ಪ್ರಕಟಗೊಂಡಿದ್ದವು. ಧನಂಜಯ (ದೈನಿಕ ಪತ್ರಿಕೆ – 1895), ವಾಗ್ಭೂಷಣ (1896), ವಾಗ್ದೇವಿ (1916 – ಹೊನ್ನಾಪುರಮಠ), ಹೀಗೆ ಅನೇಕ ಪತ್ರಿಕೆಗಳು ಜನರಲ್ಲಿ ಸ್ಫೂರ್ತಿ ತುಂಬಿ ಜನರನ್ನು ಸ್ವಾತಂತ್ರ್ಯ ಚಳವಳಿಗೆ ಪ್ರವೇಶಿಸುವಂತೆ ಮಾಡಿದವು. ಅವುಗಳಲ್ಲಿ ‘ರಾಜಹಂಸ’ ಪತ್ರಿಕೆಯೂ ಸೇರಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದ ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಯೂ ರಾಜಹಂಸ ಪತ್ರಿಕೆಗೆ ಸಲ್ಲುತ್ತದೆ. ಈ ವಾರಪತ್ರಿಕೆಯನ್ನು ರಾಮರಾವ್ ದೇಸಾಯಿ, ಹರಿಭಾವು ತಾಂಬೇಕರ, ರಾಮರಾವ್ ಬಳ್ಳಾರಿ, ವಾಮನರಾವ್ ಜಠಾರ್ ನಾಲ್ಕು ಜನ ಸೇರಿ 1891 ರಂದು ಧಾರವಾಡದಲ್ಲಿ ಹುಟ್ಟುಹಾಕಿದರು. ಧಾರವಾಡದ ದೇಸಾಯಿ ಗಲ್ಲಿಯಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಕಾಲಕ್ರಮೇಣ ವಾಮನರಾವ್ ಜಠಾರ್ ವಹಿಸಿಕೊಂಡರು.

ಸ್ಥಳೀಯ ಬ್ರಿಟಿಷ್ ಅಧಿಕಾರಿಗಳ ದುರಾಡಳಿತವನ್ನು ಅಂಜಿಕೆಯಿಲ್ಲದೆ ಕಟುವಾದ ಪದಗಳಲ್ಲಿ ಟೀಕಿಸಿ ಸಂಪಾದಕೀಯದಲ್ಲಿ ಪ್ರಕಟಿಸಲಾಗುತ್ತಿತ್ತು. 1898ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಪ್ರೇರೇಪಿಸುವ ‘ಭವಾನಿ ತಲವಾರ’ ಎಂಬ ಶೀರ್ಷಿಕೆಯಡಿ ದೇಶಭಕ್ತಿ ಗೀತೆಯನ್ನು ಪ್ರಕಟಿಸಿತು. ಇದಕ್ಕೆ ಆಕ್ಷೇಪಣೆ ಎತ್ತಿದ ಆಂಗ್ಲರ ಸರ್ಕಾರ, ಕವಿ ಬರೆದ ಗೀತೆಯ ಮೂಲ ಪ್ರತಿಯನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ ಧಾರವಾಡದ ಅಂದಿನ ಬ್ರಿಟಿಷ್ ಡಿಎಸ್ಪಿ ನೂರಕ್ಕೂ ಹೆಚ್ಚು ಪೊಲೀಸರಿಂದ ಪತ್ರಿಕೆಯ ಕಚೇರಿಯ ಮೇಲೆ ದಾಳಿ ಮಾಡಿಸಿದನು. ಪೊಲೀಸರು ನಿರಂತರ ಮೂರು ತಾಸು ಹುಡುಕಿದರೂ ಯಾವುದೇ ಆಕ್ಷೇಪಾರ್ಹ ವಸ್ತುಗಳು ಸಿಗದೇ ನಿರಾಶೆಯಿಂದ ಹಿಂದಿರುಗಿದರು. ಆಂಗ್ಲ ಅಧಿಕಾರಿಗಳ ಚಿತ್ರಹಿಂಸೆಯಿಂದ, ಪತ್ರಿಕೆಯ ಪ್ರಕಟಣೆಯನ್ನು ಬೇರೆ ದಾರಿಯಿಲ್ಲದೆ ಕೆಲವು ದಿನಗಳ ಕಾಲ ನಿಲ್ಲಿಸುವ ದುರವಸ್ಥೆ ಎದುರಾದದ್ದು ಖೇದಕರ.

‘ಪುರಂದರದಾಸರ ಕೀರ್ತನೆಗಳು’ ಎಂದು ಮುಖಪುಟದ ಮೇಲೆ ಮುದ್ರಿಸಿ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಕರಪತ್ರಗಳು ಬೇರೆ ಬೇರೆ ಭಾಗದಿಂದ ಕರ್ನಾಟಕ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರಿನಲ್ಲಿ ಪ್ರತಿದಿನ ಬರುತ್ತಿದ್ದವು. ಪ್ರತಿ ತೆರಿಗೆ ರಹಿತ ಪ್ರದೇಶಕ್ಕೆ ಒಬ್ಬ ವಿದ್ಯಾರ್ಥಿಯನ್ನು ನೇಮಿಸಲಾಗಿತ್ತು. ಹಾಸ್ಟೆಲ್ ನಿಂದ ಕರಪತ್ರಗಳನ್ನು ಸಂಗ್ರಹಿಸಿ ಗೋವಿಂದಾಚಾರ್ಯ ಎಂಬುವುರ ಮೂಲಕ ಪತ್ರಿಕೆಯ ಕಚೇರಿಗೆ ರವಾನಿಸಲಾಗುತಿತ್ತು. ಕಚೇರಿಗೆ ಬಂದ ಕರಪತ್ರಗಳಲ್ಲಿ ಅತೀ ಮುಖ್ಯವಾದ ಕರಪತ್ರಗಳನ್ನು ಆಯ್ದುಕೊಂಡು ತಕ್ಷಣ ಮರುದಿನವೇ ಪ್ರಕಟಿಸಿ ಸುದ್ದಿ ಮಾಡಲಾಗುತ್ತಿತ್ತು.

ದಂಡಿ ಉಪ್ಪಿನ ಸತ್ಯಾಗ್ರಹ, ನಾಗರಿಕ ಅಸಹಕಾರ ಚಳವಳಿ ಹೀಗೆ ಅನೇಕ ಚಳವಳಿಗಳ ಕುರಿತು ಜಾಗೃತಿಯನ್ನು ಮೂಲೆ ಮೂಲೆಗೂ ತಲುಪಿಸುತಿತ್ತು. 1931 ನಾಗರಿಕ ಅಸಹಕಾರ ಚಳವಳಿಯು ಹಿಂಸೆಯ ರೂಪ ಪಡೆದುಕೊಂಡ ಸಂದರ್ಭ, ಪೊಲೀಸ್ ಅಧಿಕಾರಿಗಳು ಪತ್ರಿಕೆಯ ಕಚೇರಿ ಹಾಗೂ ಬರಹಗಾರರ ಮನೆಯ ಮೇಲೆ ದಾಳಿ ನಡೆಸಿ ಹೆಚ್ಚು ಗಂಟೆಗಳ ಕಾಲ ಶೋಧಿಸಿದರೂ ಪತ್ರಿಕೆಗೆ ಸಂಬಂಧ ಪಟ್ಟ ರಶೀದಿಗಳು, ಚಂದಾದಾರರ ಮಾಹಿತಿಗಳು ಸಿಕ್ಕವೇ ಹೊರತು ತೆರಿಗೆ ಪ್ರತಿರೋಧಕ್ಕೆ ಸಂಬಂಧಿಸಿದ ಯಾವುದೇ ಕರಪತ್ರಗಳು ಕಾಣಸಿಗಲಿಲ್ಲ.

ಪತ್ರಿಕೆಯ ಕಚೇರಿಯು ಸ್ಥಳೀಯ ಹೋರಾಟಗಾರರ ಕೇಂದ್ರವಾಗಿತ್ತು. ಗಂಗಾಧರರಾವ್ ದೇಶಪಾಂಡೆ, ಆಲೂರು ವೆಂಕಟರಾವ್, ವಿಠಲರಾವ್ ಜೋಶಿ ಮುಂತಾದವರು ಕಚೇರಿಗೆ ಆಗಾಗ ಭೇಟಿ ಕೊಟ್ಟು ಮಾರ್ಗದರ್ಶನ ಮಾಡುತ್ತಿದ್ದರು. ಲೋಕಮಾನ್ಯ ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಸಿ ರಾಜಗೋಪಾಲಚಾರಿ ಹೀಗೆ ಅನೇಕ ಗಣ್ಯ ನಾಯಕರು ಪತ್ರಿಕೆಯ ಕಚೇರಿಗೆ ಭೇಟಿ ನೀಡಿದ್ದರು.

ಕಾಂಗ್ರೆಸ್ ಆಡಳಿತಾತ್ಮಕ ಅಧಿಕಾರಕ್ಕೆ ಬಂದ ಮೇಲೆ ವಿಶಾಲ ಕರ್ನಾಟಕ ಪ್ರಕಾಶನ ಸ್ಥಾಪನೆಯಾಯಿತು. ಏಕಕಾಲದಲ್ಲಿ ರಾಜಹಂಸ ಪತ್ರಿಕೆಯು ವಿಶಾಲ ಕರ್ನಾಟಕ ದಿನಪತ್ರಕೆಯಲ್ಲಿ ವಿಲೀನವಾಯಿತು. 50 ವರ್ಷಕ್ಕೂ ಹೆಚ್ಚು ಕಾಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಮಾತೆಯ ಸೇವೆ ಮಾಡಿದ ರಾಜಹಂಸ ಪತ್ರಿಕೆ 1944 ರಲ್ಲಿ ಅನಿವಾರ್ಯವಾಗಿ ಮುಚ್ಚಬೇಕಾಯಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!