ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಣ್ಣಗಿ ಮತ್ತು ಮುರುಗೇಶನ್ ಮರ್ಯಾದಾ ಹತ್ಯೆಯ ಪ್ರಕರಣದ ಆರೋಪಿಗಳಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಪಿ.ಕೆ. ಮಿಶ್ರಾ ಅವರಿದ್ದ ಪೀಠವು ಮನವಿಯನ್ನು ನಿರಾಕರಿಸಿ ಅರ್ಜಿಯನ್ನು ವಜಾ ಮಾಡಿತು. ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಮರ್ಯಾದಾ ಹತ್ಯೆಯ ಪ್ರಕರಣದ 8 ಆರೋಪಿಗಳು ಮದ್ರಾಸ್ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಎಂಟು ಅಪರಾಧಿಗಳ ಜೀವಾವಧಿ, ಒಬ್ಬ ಅಪರಾಧಿಗೆ ವಿಧಿಸಲಾದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಹೈಕೋರ್ಟ್ನ ನಿರ್ಧಾರವನ್ನು ಒಪ್ಪಿಕೊಂಡಿತು. ಇಬ್ಬರನ್ನು ಪ್ರಕರಣದಲ್ಲಿ ಖುಲಾಸೆ ಮಾಡಿದ ನಿರ್ಧಾರವನ್ನೂ ಎತ್ತಿಹಿಡಿಯಿತು. ಹೆಚ್ಚುವರಿಯಾಗಿ, ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ದೇಶಿಸಿತು.
ಅತ್ಯಂತ ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾದ ವನ್ನಿಯಾರ್ ಸಮುದಾಯಕ್ಕೆ ಸೇರಿದ ಯುವತಿ ಕಣ್ಣಗಿ, ಚಿದಂಬರಂನ ಅಣ್ಣಾಮಲೈ ವಿವಿಯಲ್ಲಿ ಓದುತ್ತಿದ್ದಾಗ ಪರಿಶಿಷ್ಟ ಜಾತಿಯ ಮರುಗೇಶನ್ ಅವರನ್ನು ಪ್ರೀತಿಸುತ್ತಿದ್ದರು. ಇದನ್ನು ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು. ಕಣ್ಣಗಿ ಮತ್ತು ಮರುಗೇಶನ್ ಅವರು ಜಾತಿ ಅಡೆತಡೆಗಳನ್ನು ಮೀರಿ ಮೇ 5, 2003 ರಲ್ಲಿ ಕಡಲೂರಿನಲ್ಲಿ ಮದುವೆಯಾಗಿದ್ದರು.ಈ ಬಗ್ಗೆ ತಿಳಿದ ಯುವತಿಯ ಕುಟುಂಬಸ್ಥರು 2003ರ ಜುಲೈ 8 ರಂದು ದಂಪತಿಯನ್ನು ಸ್ಮಶಾನಕ್ಕೆ ಎಳೆದೊಯ್ದು ಅಲ್ಲಿ ವಿಷಪ್ರಾಶನ ಮಾಡಿಸಿದ್ದರು. ನಂತರ ದೇಹಗಳನ್ನು ಸುಟ್ಟು ಇದೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದರು.ಮುರುಗೇಶನ್ ಅವರ ತಂದೆಯ ಒತ್ತಾಯದ ಮೇರೆಗೆ ತನಿಖೆಯಲ್ಲಿ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ವರ್ಗಾಯಿಸಲಾಗಿತ್ತು. ಅದು 2009 ರಲ್ಲಿ ಅಂತಿಮ ವರದಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಕೃತ್ಯದಲ್ಲಿ 13 ಮಂದಿಯನ್ನು ತಪ್ಪಿತಸ್ಥರು ಎಂದು ಘೋಷಿಸಿತು. ಪ್ರಮುಖ ಆರೋಪಿಯಾದ ಯುವತಿ ಕಣ್ಣಗಿ ಅವರ ಸಹೋದರನಿಗೆ ಮರಣದಂಡನೆ ವಿಧಿಸಿತು. ಉಳಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿತು.