ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾದಿ ಮೊಹಮದ್ ರ ಕುರಿತು ಅವಹೇಳನ ಮಾಡಲಾಗಿದೆಯೆಂದು ಕಾನ್ಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಸ್ಥಳೀಯ ಮುಸ್ಲಿಂ ಮುಖಂಡ ಹಯಾತ್ ಜಾಫರ್ ಹಶ್ಮಿ ಎಂಬಾತನ್ನು ಕೂಡ ಬಂಧಿಸಲಾಗಿದೆ.
ಟಿವಿ ಮಾಧ್ಯಮ್ ಚರ್ಚೆಯ ವೇಳೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮದ್ ರ ಕುರಿತು ವಿವದಾತ್ಮಕ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಮಾರುಕಟ್ಟೆ ಬಂದ್ ಗೆ ಈತ ಕರೆ ನೀಡಿದ್ದು ಇತರರು ಬಂದ್ ವಿರೋಧಿಸಿದ ಹಿನ್ನೆಲೆಯಲ್ಲಿ ಹಶ್ಮಿ ಗಲಭೆಗೆ ಜನರನ್ನು ಪ್ರಚೋದಿಸಿದ್ದ ಎನ್ನಲಾಗಿದೆ. ಗಲಭೆಯಲ್ಲಿ 3 ಪೋಲೀಸ್ ಸಿಬ್ಬಂದಿ ಸೇರಿದಂತೆ 30 ಹೆಚ್ಚು ಜನರಿಗೆ ಗಾಯವಾಗಿದ್ದು ಹಲವಾರು ಅಂಗಡಿಗಳಿಗೆ ಹಾನಿಯಾಗಿದೆ.
ಮೌಲಾನಾ ಮುಹಮ್ಮದ್ ಜೌಹರ್ ಅಲಿ ಅಭಿಮಾನಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಹಯಾತ್ ಜಾಫರ್ ಹಶ್ಮಿ ಈ ಹಿಂದೆ ಕಾನ್ಪುರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಎನ್ಆರ್ಸಿ ವಿರುದ್ಧದ ಪ್ರತಿಭಟನೆಗಳಲ್ಲೂ ಪ್ರಮುಖಪಾತ್ರ ವಹಿಸಿದ್ದ ಎನ್ನಲಾಗಿದೆ.
ಗಲಭೆಕೋರರ ವಿರುದ್ಧ ಕಠಿಣ ಗೂಂಡಾ ಕಾಯ್ದೆ ದಾಖಲಿಸಲಾಗುವುದು ಹಾಗೂ ಗಲಭೆಕೋರರಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಇಲ್ಲವೇ ನಾಶಪಡಿಸಲಾಗುವುದು ಎಂದು ಪೋಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಎಹಿತ್ಶಾಮ್ ಕಬಾಡಿ, ಜೀಶನ್, ಆಕಿಬ್, ನಿಜಾಮ್, ಅಜೀಜುರ್, ಅಮೀರ್ ಜಾವೇದ್, ಇಮ್ರಾನ್ ಕಾಳೆ, ಯೂಸುಫ್ ಮನ್ಸೂರಿ ಮುಂತಾದವರನ್ನು ವಶಪಡಿಸಿಕೊಳ್ಳಲಾಗಿದ್ದು 1,000ಕ್ಕೂ ಹೆಚ್ಚಿನ ಗಲಭೆಕೋರರ ಮೇಲೆ ಮೂರು ಎಫ್ಐಆರ್ಗಳನ್ನು ದಾಖಲಿಸಲಾಗಿದೆ.