ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ನಡುವೆ ಮೇ 10ರಂದು ಫಲಿತಾಂಶ ಪ್ರಕಟಣೆಯ ದಿನಾಂಕದಂದೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈಗ ತರಾತುರಿಯಲ್ಲಿ ಅಕ್ರಮ ನೇಮಕ ಮಾಡಿಕೊಳ್ಳುವ ಸಲುಗಾವಿ ಮೌಖಿಕ ಸಂದರ್ಶನ ನಡೆಸಲಾಗಿದೆ.
ಇದು ಅಕ್ರಮದಿಂದ ಕೂಡಿದ್ದು, ಈ ನೇಮಕಾತಿ ರದ್ದುಗೊಳಿಸಿ, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದಿರುವಂತ ಅವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಜಗತ್ತಿನಲ್ಲಿಯೇ ಜಾನಪದಕ್ಕಾಗಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯವಾಗಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸ್ಥಾಪನೆ ಆಗಿರುತ್ತದೆ. ಕರ್ನಾಟಕ ಜಾನಪದ ಅಕಾಡೆಮಿಯ ನಿರ್ಣಯದ ಮೂಲಕ ಅನೇಕ ಹಿರಿಯರ ಪ್ರಯತ್ನ ಮತ್ತು ಮಾರ್ಗದರ್ಶನದ ಮೂಲಕ ಕರ್ನಾಟಕದಲ್ಲಿ ಜಾನಪದವನ್ನು ಸಮೃದ್ಧಗೊಳಿಸುವ ಕಾರಣಕ್ಕಾಗಿ ಜಾನಪದ ವಿವಿ ಸ್ಥಾಪನೆ ಮಾಡಲಾಗಿದೆ ಎಂದಿದ್ದಾರೆ.