ಪಂಜಾಬ್ ಸರ್ಕಾರದಿಂದ ಪ್ರಧಾನಿ ಭದ್ರತೆಗೆ ಕುತ್ತು – ಕರ್ನಾಟಕದ ಖಂಡನಾ ಧ್ವನಿಗಳಿವು

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಇಂದು ಪಂಜಾಬ್‌ಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಲೋಪ ಎದುರಾಗಿದೆ. ದೇಶದ ಪ್ರಧಾನಿಯವರ ಭದ್ರತೆಯಲ್ಲಿ ಉಂಟಾದ ಲೋಪ ಹಾಗೂ ಪಂಜಾಬ್ ಸರಕಾರದ ನಿರ್ಲಕ್ಷ್ಯದ ಕುರಿತು ಕರ್ನಾಟದಲ್ಲಿಯೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಂಟಾಗಿರುವ ಭದ್ರತಾ ಲೋಪವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ನಡೆಯಬಾರದು. ಇದೇ ಸಂದರ್ಭದಲ್ಲಿ ಇದು ಒಂದು ಸಹಜ ಘಟನೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚೆನ್ನಿ ಅವರು ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದಿದ್ದಾರೆ.

ಬಿ ಎಲ್ ಸಂತೋಷರ ಸರಣಿ ಟ್ವೀಟ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ತಮ್ಮ ಸರಣಿ ಟ್ವೀಟ್‌ಗಳಲ್ಲಿ, ‘ಆಡಳಿತ ಮತ್ತು ಪೋಲೀಸರ ರಾಜಕೀಯ ಹೊಸ ಮಟ್ಟಕ್ಕೆ ಇಳಿದಿದೆ. 1975ರ ತುರ್ತು ಪರಿಸ್ಥಿತಿಯ ನಂತರ ಪಂಜಾಬ್ ಇಂದು ಎರಡನೇ ಘೋರ ತಪ್ಪನ್ನು ಮಾಡಿದೆ. ಗೌರವಾನ್ವಿತ ಪ್ರಧಾನಿಗಳ ಭದ್ರತೆಗೆ ಧಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ನಾಯಕತ್ವವು ಇದಕ್ಕೆ ಭಾರೀ ಬೆಲೆ ನೀಡಲಿದೆ.’

‘ಭಟಿಂಡಾ ವಿಮಾನ ನಿಲ್ದಾಣಕ್ಕೆ ಜೀವಂತವಾಗಿ ಮರಳಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದಗಳು’.. ಸಾಮಾನ್ಯವಾಗಿ ಶಾಂತ ಸ್ವಭಾವದ ಪ್ರಧಾನಿಯೊಬ್ಬರು ಇದನ್ನು ಹೇಳಿದರೆ, ಭದ್ರತಾ ಉಲ್ಲಂಘನೆಯಲ್ಲಾದ ಲೋಪವನ್ನು ಊಹಿಸಿ. ಕಾಂಗ್ರೆಸ್ ನೇತೃತ್ವದಲ್ಲಿ ಪಂಜಾಬ್ ಸರಕಾರದ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚೆನ್ನಿ ಇಂದು ಇದಕ್ಕೆ ಅನುಮತಿಸಿದ್ದಾರೆ.’

‘ಯೇ ಖುದ್ರಾತಿ ಹುವಾ’ ಇದು ಸಹಜವಾಗಿ ನಡೆದಿದ್ದು ಅಂತ ವ್ಯಂಗ್ಯವಾಡಿದ್ದಾರೆ ಪಂಜಾಬ್ ಮುಖ್ಯಮಂತ್ರಿ! 1962ರ ಪ್ರಮಾದ, ತುರ್ತು ಪರಿಸ್ಥಿತಿ ಹೇರಿಕೆ, ಆಪರೇಷನ್ ಬ್ಲೂ ಸ್ಟಾರ್ ಮತ್ತು ಇಂದು ಇದು. ಗಾಂಧೀಜಿಯವರು ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜಿಸಬೇಕೆಂದು ಬಯಸಿದ್ದರಲ್ಲಿ ಆಶ್ಚರ್ಯವಿಲ್ಲ.’

‘ಪ್ರತಿಭಟನಾಕಾರರು ಓವರ್ ಮೇಲೆ ಪ್ರಧಾನಿ ಕಾನ್ ವೇ ತಡೆದರು. ಅದಕ್ಕೂ ಮುನ್ನ ಪ್ರತಿಭಟನಾಕಾರರು ಕಾನ್‌ವೇ ಉದ್ದಕ್ಕೂ ಸುಮಾರು 500 ಮೀಟರ್‌ಗಳಷ್ಟು ಓಡಿದರು. ಇದು ಕಾಂಗ್ರೆಸ್ ಮಾರ್ಗದರ್ಶನದ ಅಡಿಯಲ್ಲಿ ಆಡಳಿತಾತ್ಮಕ ಮತ್ತು ಭದ್ರತೆ ಎರಡರ ಉಲ್ಲಂಘನೆಯಾಗಿದೆ. ಇಲ್ಲಿ ಸಾಕಷ್ಟು ಕೆಲಸ ಮಾಡಿದೆ’ ಎಂದು ಬಿ.ಎಲ್. ಸಂತೋಷ್ ಟ್ವೀಟ್ ಮಾಡಿದ್ದಾರೆ.

 

 

ಪಾಕಿಸ್ತಾನದಿಂದ ಪಂಜಾಬ್ ಕಾಂಗ್ರೆಸ್ ಸುಪಾರಿ ಪಡೆದಿದೆಯೇ?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ‘ದೇಶದ ಪ್ರಧಾನಿಯ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾಂಗ್ರೆಸ್ ಆಡಳಿತದ ಪಂಜಾಬ್ ಪಾಕಿಸ್ತಾನದಿಂದ ಸುಫಾರಿ ಪಡೆದಿತ್ತಾ ಎನ್ನುವ ಪ್ರಶ್ನೆ ಮೂಡುತ್ತದೆ. ತಮ್ಮ ಏಳಿಗೆಗೆ ಅಡ್ಡಬರುವವರ ಪ್ರಾಣ ತೆಗೆಯಲು ಜನಪಥ್ 10 ರ ಕಾಂಗ್ರೆಸ್ಸಿಗರು ಹೇಸುವವರಲ್ಲ ಎಂದು ಹಿಂದೆ ಸಿಂಧಿಯಾ, ರಾಜೇಶ್ ಪೈಲೆಟ್ ಸಹಿತ ಅನೇಕರ ಸಾವಿನಲ್ಲಿ ಸಾಬೀತಾಗಿದೆ.’ ಎಂದು ಟೀಕಿಸಿದ್ದಾರೆ.

ಸಚಿವ ಡಾ. ಅಶ್ವತ್ಥ್‌ನಾರಾಯಣ್ ಟ್ವೀಟ್ ಮಾಡಿ, ‘ಪಂಜಾಬ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಜೊತೆ ಭಗತ್‌ಸಿಂಗ್ ಮತ್ತಿತರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಕಾಂಗ್ರೆಸ್ ಸರಕಾರ ನಡೆಸಿಕೊಂಡ ರೀತಿ ಖಂಡನೀಯ. ದೇಶದ ಪ್ರಧಾನಿಯ ವಿಚಾರವಾಗಿ ದೊಡ್ಡ ಭದ್ರತಾ ಲೋಪ ಮಾಡಿರುವುದು ಕಳವಳದ ಸಂಗತಿ’ ಎಂದು ಹೇಳಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!