ಹೊಸದಿಗಗಂತ ಡಿಜಿಟಲ್ ಡೆಸ್ಕ್
ಜೂನ್ 10 ರಂದು 5 ಭಾಷೆಗಳಲ್ಲಿ ತೆರೆಕಂಡ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಥಿಯೇಟರ್ಗಳಲ್ಲಿ ಕಮಾಲ್ ಮಾಡುತ್ತಿದೆ. ಮನುಷ್ಯ ಹಾಗೂ ಶ್ವಾನದ ನಡುವಿನ ಭಾವನಾತ್ಮಕ ಕಥಾಹಂದರವಿರುವ ಚಿತ್ರ ಪ್ರೇಕ್ಷಕರ ಹೃದಯ ಗೆದ್ದಿದೆ. ಎಲ್ಲಾ ವಯೋಮಾದ ಪ್ರೇಕ್ಷಕರು ಚಿತ್ರವನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಚಿತ್ರ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಸಿಎಂ ಬೊಮ್ಮಾಯಿ ಚಿತ್ರವನ್ನು ಸಂಪೂರ್ಣವಾಗಿ ಇಷ್ಟಪಟ್ಟರು. ಕಳೆದ ವರ್ಷ ನಿಧನ ಹೊಂದಿದ ತಮ್ಮ ನಾಯಿಯನ್ನು ನೆನೆಸಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಇಂತಹ ಉತ್ತಮ ಚಿತ್ರವನ್ನು ನಿರ್ಮಿಸಿದ್ದಕ್ಕೆ ನಿರ್ಮಾಪಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
“ನಾಯಿಗಳ ಬಗ್ಗೆ ಹಲವಾರು ಚಲನಚಿತ್ರಗಳು ಬಂದಿವೆ. ಆದರೆ ಈ ಚಿತ್ರವು ನಮ್ಮ ಭಾವನೆಗಳನ್ನು ಮೂಕ ಪ್ರಾಣಿಗಳೊಂದಿಗೆ ಕನೆಕ್ಟ್ ಮಾಡುವ ಮೂಲಕ ಮನಸ್ಸನ್ನು ಆದ್ರಗೊಳಿಸುತ್ತದೆ. ಚಿತ್ರದ ಶ್ವಾನವು ತನ್ನ ಭಾವನೆಗಳನ್ನು ತನ್ನ ಕಣ್ಣುಗಳ ಮೂಲಕವೇ ವ್ಯಕ್ತಪಡಿಸುವುದನ್ನು ನೋಡಿದರೆ ಕಣ್ತುಂಬಿ ಬರುತ್ತದೆ. ಚಿತ್ರ ಅದ್ಭುತವಾಗಿದೆ ಮತ್ತು ಎಲ್ಲರೂ ಇದನ್ನು ನೋಡಬೇಕು. ನಾನು ಬೇಷರತ್ತಾದ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದೇನೆ. ನಾಯಿಯ ಪ್ರೀತಿಯು ಶುದ್ಧ ಬೇಷರತ್ತಾದ ಪ್ರೀತಿಯಾಗಿದೆʼ ಎಂದು ಬೊಮ್ಮಾಯಿ ಚಿತ್ರ ಮುಗಿದ ಮಾರ್ಮಿಕವಾಗಿ ಹೇಳಿದರು.
ಕೆ ಕಿರಣರಾಜ್ ನಿರ್ದೇಶನದ 777 ಚಾರ್ಲಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಇದನ್ನು ನಿರ್ಮಿಸಿದ್ದಾರೆ. ಚಿತ್ರವು ಪ್ರಾಣಿಪ್ರಿಯರ ಚಿತ್ರವಾಗಿದೆ. ಇದು ಮನುಷ್ಯ ಮತ್ತು ಸಾಕು ನಾಯಿಯ ನಡುವಿನ ಬಾಂಧವ್ಯವನ್ನು ಸುಂದರವಾಗಿ ಚಿತ್ರಿಸಲಾಗಿದೆ.