ಹೊಸದಿಗಂತ ಡಿಜಿಟಲ್ ಡೆಸ್ಕ್
ಅನುಮತಿಯಿಲ್ಲದೆ ರಸ್ತೆಬದಿ ಹೊಂಡ ಅಗೆದು ಕೆಲಸ ಮುಗಿದ ನಂತರವೂ ಅದನ್ನು ಮುಚ್ಚದೆ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡಿದ್ದ ಟೆಲಿಕಾಂ ದೈತ್ಯ ಏರ್ಟೆಲ್ ಸಂಸ್ಥೆ ಮೇಲೆ ಮಂಗಳೂರಿನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಪಾದಚಾರಿ ಮಾರ್ಗವನ್ನು ಅಗೆದು ಭೂಗತ ಕೇಬಲ್ಗಳನ್ನು ಆಳವಡಿಸುವ ಕಾಮಗಾರಿ ನಡೆಸಿದ್ದ ಏರ್ಟೆಲ್ ಕಂಪನಿ ಆಬಳಿಕ ಗುಂಡಿ ಮುಚ್ಚದೆ ನಿರ್ಲಕ್ಷ್ಯ ತೋರಿತ್ತು. ಮಂಗಳವಾರ ಮಹಿಳೆಯೊಬ್ಬರು ಈ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದರು. ಸ್ಥಳೀಯರು ಮಹಿಳೆಯರನ್ನು ಗಮನಿಸಿ ರಕ್ಷಿಸಿದ್ದಾರೆ. ಈ ಹೊಂಡವನ್ನು ತೆರೆದು ಒಂದು ತಿಂಗಳಾದರೂ ಅಪೂರ್ಣವಾಗಿ ಬಿಡಲಾಗಿದೆ ಎನ್ನಲಾಗಿದೆ. ಈ ಘಟನೆ ಬಳಿಕ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪಾಲಿಕೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಕಂಪನಿಯು ಇಲ್ಲಿ ಗುಂಡಿ ತೆಗೆಯಲು ಪಾಲಿಕೆಯಿಂದ ಪೂರ್ವಾನುಮತಿ ಪಡೆದಿಲ್ಲ ಹಾಗೂ ನಿವಾಸಿಗಳನ್ನು ಎಚ್ಚರಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪಾಲಿಕೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಮೇಲಾಗಿ ದುರಸ್ತಿ ಕಾರ್ಯ ನಡೆದರೂ ಗುಂಡಿ ಮುಚ್ಚದ ಕಾರಣ ಮಹಿಳೆಯೊಬ್ಬರು ಗುಂಡಿಗೆ ಬಿದ್ದು ಗಾಯಗೊಂಡಿರುವುದನ್ನು ಪರಿಗಣಿಸಿ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ