ಹೊಸ ದಿಗಂತ ವರದಿ, ಹಾವೇರಿ:
ಜಗತ್ತಿನಲ್ಲಿನೆ ಒಂದೇ ಒಂದು ಜಾನಪದ ವಿ.ವಿ. ಎನಿಸಿಕೊಂಡಿರುವ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯ ಏಳಿಗೆಗೆ ಮತ್ತು ಇದರ ಕಾರ್ಯ ಚಟುವಟಿಕೆಗಳು ವ್ಯಾಪಿಸುವುದಕ್ಕೆ ಪ್ರತಿ ವರ್ಷ ಹೆಚ್ಚಿನ ಅನುದಾನ ನೀಡಿದಾಗ ಮಾತ್ರ ಸಾಧ್ಯವಾಗುತದೆ ಎಂದು ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆವರಣದ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಗುರುವಾರ ೬ ಮತ್ತು 7ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದಲೇ ಈ ವಿ.ವಿ.ಯನ್ನು ಪ್ರಾರಂಭಿಸಲಾಗಿರುವುದರಿಂದ ಈ ವಿ.ವಿ.ಗೆ ಸಣ್ಣ ಪ್ರಮಾಣದ ಅನುದಾನ ನೀಡುವುದರಿಂದ ಅದರ ಉದ್ದೇಶ ಸಾಕಾರಗೊಳ್ಳುವುದಿಲ್ಲ ಸರ್ಕಾರ ಹೆಚ್ಚಿನ ಅನುದಾನ ನೀಡುವುದಕ್ಕೆ ಮುಂದಾಗಬೇಕೆಂದು ಅವರು ಕೇಳಿಕೊಂಡರು.
ಅಘಾದವಾದ ಜಾನಪದ ಕ್ಷೇತ್ರಕ್ಕೆ ಸಣ್ಣ ಪ್ರಮಾಣದ ಅನುದಾನ ನೀಡದೇ ಎಷ್ಟು ಹೆಚ್ಚು ಕೋಟಿ ಹಣ ನೀಡುವುದಕ್ಕೆ ಸಾಧ್ಯವೋ ಅಷ್ಟು ಕೋಟಿ ಅನುದಾನ ನೀಡಿದರೆ ಜಾನಪದ ಕ್ಷೇತ್ರದಲ್ಲಿ ಉಳಿಸಿ ಬೆಳೆಸುವುದಕ್ಕೆ ಸಾಧ್ಯ ಎಂದರು.
ಜಾನಪದ ಸಾಹಿತ್ಯ ಹಾಗೂ ಕಲೆಗಳಲ್ಲಿರುವ ಸೌಂದರ್ಯ ಹಾಗೂ ಜ್ಞಾನವನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ತತ್ವಜ್ಞಾನವನ್ನು ತಂತ್ರಜ್ಞಾನದೊಂದಿಗೆ ಬೆಸೆಯುವ ಕಾರ್ಯವನ್ನು ಕರ್ನಾಟಕ ವಿಶ್ವವಿದ್ಯಾಲಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಪಾರಂಪರಿಕವಾಗಿ ಬೆಳೆದು ಬಂದಿರುವ ಜಾನಪದವನ್ನು ಸಂರಕ್ಷಿಸುವ ಜೊತೆಗೆ ಜನಪದ ಕಲೆಗಳನ್ನು ಮರು ರೂಪಿಸುವ ಜವಾಬ್ದಾರಿ ನಾವು ಹೊರಬೇಕಾಗಿದೆ. ದಾಖಲೀಕರಣದ ಮೂಲಕ ಸಂಗ್ರಹಿಸಿದ ಮಾಹಿತಿಗಳ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಅತ್ಯುತ್ತಮ ಗುಣಮಟ್ಟದ ಶ್ರವ್ಯ ಮತ್ತು ದೃಶ್ಯ ಆರ್ಕೈವ್ಗಳ ಸ್ಥಾಪನೆ ಆಗಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಕುಲಪತಿ ಡಾ.ಭಾಸ್ಕರ್ ಟಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವರು ಪ್ರೊ.ಎನ್.ಎಂ.ಸಾಲಿ ಹಾಗೂ ರಿಜಿಸ್ಟರ್ ಜಿ.ಟಿ.ಗುರುಪ್ರಸಾದ್ ಹಾಗೂ ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.