ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೇರಲು ಬಿಜೆಪಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಇದರ ನಡುವೆ ಜೆಡಿಎಸ್ ಕೂಡ ತನ್ನ ಪ್ರಯತ್ನ ನಡೆಸುತ್ತಿದೆ.
ಇವುಗಳ ಮದ್ಯೆ ತಾನು ಕೂಡ ಒಂದು ಸೀಟ್ ಆದರೂ ಗೆಲ್ಲಬೇಕೆಂಬ ಕನಸನ್ನು ಆಮ್ ಆದ್ಮಿ ಪಾರ್ಟಿ ಕಾಣುತ್ತಿದೆ. ಇದಕ್ಕಾಗಿ ಕರ್ನಾಟಕ ಜನರ ಮೋಡಿ ಮಾಡಲು ರಾಷ್ಟ್ರೀಯ ಪಕ್ಷದ ಸ್ಥಾನಮಾನ ಹಿಡಿದು ಆಪ್ ಸಜ್ಜಾಗಿದೆ.
ಚುನಾವಣಾ ಆಯೋಗ ಇನ್ನೂ ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಪಕ್ಷದ ಸ್ಥಾನ ಮಾನ ನೀಡಿಲ್ಲ. ಇದರ ವಿರುದ್ಧ ಆಮ್ ಆದ್ಮಿ ಪಾರ್ಟಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಬೇಕಾದ ಎಲ್ಲಾ ಅರ್ಹ ಪಡೆದಿದೆ. ಆದರೆ ಚುನಾವಣಾ ಆಯೋಗ ರಾಷ್ಟ್ರೀಯ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿದೆ. ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಈ ಕುರಿತು ಎಪ್ರಿಲ್ 13ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್, ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಆಮ್ ಆದ್ಮಿ ಪಾರ್ಟಿ ವಕ್ತಾರ ಬ್ರಿಜೇಶ್ ಕಾಳಪ್ಪ, ರಾಷ್ಟ್ರೀಯ ಪಕ್ಷದ ಸ್ಥಾನಮಾನ ವಿಳಂ ಕಾರಣ ಕರ್ನಾಟಕ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಕೋರ್ಟ್, ಈಗಾಗಲೇ ಆಯೋಗಕ್ಕೆ ಸೂಚನೆ ನೀಡಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗುವ ಎಲ್ಲಾ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಯಾವುದೇ ರಾಜಕೀಯ ಪಕ್ಷ 4 ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ತಲಾ ಶೇ.6ಕ್ಕಿಂತ ಅಧಿಕ ಮತ ಅಥವಾ ತಲಾ 2 ಶಾಸಕ ಸ್ಥಾನಗಳನ್ನು ಗೆದ್ದರೆ ಅದನ್ನು ರಾಷ್ಟ್ರೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ದೆಹಲಿ, ಪಂಜಾಬ್ನಲ್ಲಿ ಸ್ವಂತ ಬಲದ ಮೇಲೆ ಆಪ್ ಅಧಿಕಾರದಲ್ಲಿದೆ. ಕಳೆದ ಮಾಚ್ರ್ನಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶೇ.6.8 ಮತ ಗಳಿಕೆಯೊಂದಿಗೆ ಇಬ್ಬರು ಶಾಸಕರನ್ನು ಗೆಲ್ಲಿಸಿಕೊಂಡಿದೆ. ಇದೀಗ ನಾಲ್ಕನೇ ರಾಜ್ಯವಾದ ಗುಜರಾತಿನಲ್ಲಿ ಮತ ಗಳಿಕೆ, ಶಾಸಕ ಸ್ಥಾನ ಎರಡನ್ನೂ ಸಂಪಾದಿಸಿದೆ. ಆಯೋಗ ಹೇಳಿರುವ ಎಲ್ಲಾ ಮಾನದಂಡಗಳನ್ನು ಆಪ್ ಪೂರೈಸಿದೆ. ಹೀಗಾಗಿ ಆಮ್ ಆದ್ಮಿ ಪಾರ್ಟಿ, ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮಕಲು ರಾಷ್ಟ್ರೀಯ ಪಕ್ಷ ಸ್ಥಾನ ಹಣೆಪಟ್ಟಿ ಪಡೆಯಲು ಆಪ್ ಮುಂದಾಗಿದೆ.