ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಂಡಿಚೇರಿ ವಿರುದ್ಧ ಇನ್ನಿಂಗ್ಸ್ ಹಾಗೂ 20 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕರ್ನಾಟಕ ತಂಡವು ರಣಜಿ ಟ್ರೋಫಿ ಪ್ರೀ ಕ್ವಾರ್ಟರ್ ಫೈನಲ್ ಗೆ ಲಗ್ಗೆಇಟ್ಟಿದೆ. ಹಿಂದಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಕರ್ನಾಟಕ ಈ ಪಂದ್ಯದಲ್ಲಿ ಪಂಡಿಚೇರಿಯನ್ನು ಬಗ್ಗುಬಡಿದು ಹದಿನಾರರ ಘಟ್ಟಕ್ಕೆ ಪ್ರವೇಶಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಪರ ಆರಂಭಿಕ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್ (178), ನಾಯಕ ಮನೀಷ್ ಪಾಂಡೆ (107) ಭರ್ಜರಿ ಶತಕ ಸಿಡಿಸುವ ಮೂಲಕ ಮೊದಲ ಇನಿಂಗ್ಸ್ನಲ್ಲಿ ರಾಜ್ಯವು 8 ವಿಕೆಟ್ ನಷ್ಟಕ್ಕೆ 453 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಸವಾಲು ಬೆನ್ನತ್ತಿದ ಪುದುಚೇರಿ ತಂಡವು ಕೃಷ್ಣಪ್ಪ ಗೌತಮ್ ಮಾರಕ ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್ನಲ್ಲಿ ಕೇವಲ 241 ರನ್ಗಳಿಗೆ ಸರ್ವಪತನ ಕಂಡಿತ್ತು. ಭಾರೀ ಮುನ್ನಡೆ ಪಡೆದ ಕರ್ನಾಟಕ ಫಾಲೋಆನ್ ಹೇರಿತ್ತು. 2ನೇ ಇನಿಂಗ್ಸ್ ಆರಂಭಿಸಿದ ಪುದುಚೇರಿ ಶ್ರೇಯಸ್ ಗೋಪಾಲ್ ಸ್ಪಿನ್ ದಾಳಿಗೆ ದಿಕ್ಕುತಪ್ಪಿತು. ದ್ವಿತೀಯ ಇನಿಂಗ್ಸ್ನಲ್ಲಿ 192 ರನ್ಗೆ ಕುಸಿದು ಇನಿಂಗ್ಸ್ ಹಾಗೂ 20 ರನ್ಗಳಿಂದ ಸೋಲೋಪ್ಪಿಕೊಂಡಿದೆ. ರಾಜ್ಯದ ಪರ ಕೆ.ಗೌತಮ್ ಮೊದಲ ಇನ್ನಿಂಗ್ಸ್ ನಲ್ಲಿ 5 ಹಾಗೂ ಶ್ರೇಯಸ್ ಗೋಪಾಲ್ ದ್ವಿತೀಯ ಇನಿಂಗ್ಸ್ನಲ್ಲಿ 5 ವಿಕೆಟ್ ಉರುಳಿಸಿದರು. ಭಾರೀ ಜಯದೊಂದಿಗೆ ಕರ್ನಾಟಕ ಗ್ರೂಪ್ ಸಿ ನಲ್ಲಿ ಅಗ್ರ ತಂಡವಾಗಿ ಪ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.