ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟ ಎಸ್ಎಸ್ಎಲ್ಸಿ ಪರೀಕ್ಷೆ ಇಂದಿನಿಂದ ಪ್ರಾರಂಭ ಆಗಲಿದೆ. ಪರೀಕ್ಷೆಯನ್ನು ಎರಡು ವರ್ಷಗಳ ನಂತರ ಕೋವಿಡ್-19 ಪೂರ್ವ ಮಾದರಿಯಲ್ಲಿ ನಡೆಸಲಾಗುತ್ತಿದೆ. ರಾಜ್ಯದ 3444 ಪರೀಕ್ಷಾ ಕೇಂದ್ರಗಳಲ್ಲಿ 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಒಟ್ಟು 15,387 ಶಾಲೆಗಳ 8,73,846 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 452732 ಬಾಲಕರು, 421110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿಗಳು. ಇವರಿಗೆ 45289 ಪರೀಕ್ಷಾ ಕೊಠಡಿಗಳು, 3444 ಮುಖ್ಯ ಅಧೀಕ್ಷಕರು, 377 ಉಪ ಮುಖ್ಯ ಅಭಿರಕ್ಷಕರು, 49817 ಕೊಠಡಿ ಮೇಲ್ವಿಚಾರಕರನ್ನು ಪರೀಕ್ಷಾ ಕಾರ್ಯಗಳಿಗಾಗಿ ನಿಯೋಜನೆ ಮಾಡಲಾಗಿದೆ.
ಹಿಜಾಬ್ಗೆ ಅವಕಾಶವಿಲ್ಲ:
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಶಿಕ್ಷಣ ಇಲಾಖೆ ಪಾಲನೆ ಮಾಡಲಿದೆ. ಹಿಜಾಬ್ ಧರಿಸಿದವರನ್ನು ಪರೀಕ್ಷಾ ಕೇಂದ್ರಕ್ಕೆ ಬಿಡದಿರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ಹಿನ್ನಲೆಯಲ್ಲಿ ಹಿಜಾಬ್ ಬೇಕು ಎನ್ನುವವರು ಪರೀಕ್ಷೆಯಿಂದ ಹೊರಗುಳಿಯಲಿದ್ದಾರೆ. ಯಾವುದೇ ಉದ್ದೇಶದಿಂದ ಪರೀಕ್ಷೆಗೆ ಗೈರು ಹಾಜರಿ ಆದವರಿಗೆ ಮರು ಪರೀಕ್ಷೆ ಮಾಡುವುದಿಲ್ಲ. ಬದಲಿಗೆ ಪೂರಕ ಪರೀಕ್ಷೆ ಬರೆಯಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈ ಮೂಲಕ ಪರೀಕ್ಷಾ ಕೇಂದ್ರದೊಳಗೆ ಹಿಜಾಬ್ ಧರಿಸಲು ಅವಕಾಶ ಕೋರಿ ಪ್ರತಿಭಟನೆ ನಡೆಸಲು ಪರೀಕ್ಷೆಗೆ ಗೈರಾದರೆ ಅಂತಹ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.