ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಚಲಾವಣೆಯಾದ ದೊಡ್ಡ ಅಭಿಯಾನ ಎಂದರೆ, ಪಠ್ಯಪುಸ್ತಕ ಪರಿಷ್ಕರಣೆ ನೇತೃತ್ವ ವಹಿಸಿದ್ದ ರೋಹಿತ ಚಕ್ರತೀರ್ಥರ ಸಮಿತಿ ಬೇಕಂತಲೇ ಕುವೆಂಪು ಅವರ ಪರಿಚಯವನ್ನು ಮೊಟಕಾಗಿಸಿದೆ ಅನ್ನೋದು. ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಕುವೆಂಪು ಅವರ ಪರಿಚಯವನ್ನು ಕೆಲವೇ ಸಾಲುಗಳಿಗೆ ಸೀಮಿತಗೊಳಿಸಿ, ರಾಮಾಯಣ ದರ್ಶನಂ ಥರದ ಮುಖ್ಯ ಕೃತಿಗಳನ್ನು ಉಲ್ಲೇಖಿಸದೇ ಬಿಡಲಾಗಿದೆ ಹಾಗೂ ಕುವೆಂಪು ಅವರು ಇನ್ಯಾರದೋ ಬೆಂಬಲದಿಂದ ಕವಿಯಾದರು ಎಂಬ ಅರ್ಥದ ಸಾಲುಗಳನ್ನು ಸೇರಿಸಲಾಗಿದೆ ಎಂದು ಆ ಪಠ್ಯ ಭಾಗದ ಚಿತ್ರವನ್ನು ಲಗತ್ತಿಸಲಾಗಿತ್ತು.
ಇದಕ್ಕೆ ರೋಹಿತ ಚಕ್ರತೀರ್ಥ ಅವರು ಫೇಸ್ಬುಕ್ ಮೂಲಕ ಉತ್ತರ ಕೊಟ್ಟು, ಈ ಸಾಲುಗಳನ್ನು ಬರೆದಿರುವುದು ಬರಗೂರರ ನೇತೃತ್ವದ ಪಠ್ಯ ಸಮಿತಿಯೇ ಹೊರತು ತಮ್ಮ ಸಮಿತಿ ಅಲ್ಲ ಹಾಗೂ ಆ ಪಠ್ಯವನ್ನು ಮೊದಲಿನಂತೆಯೇ ಇಡಲಾಗಿದೆಯೇ ಹೊರತು ಪರಿಷ್ಕರಣೆ ಮಾಡಲಾಗಿಲ್ಲ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಮಂಗಳವಾರ ಕರ್ನಾಟಕ ಪಠ್ಯಪುಸ್ತಕ ಸಂಘವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಅದೂ ಸಹ ಇದೇ ಸತ್ಯವನ್ನೇ ಜನರೆದುರು ಇಟ್ಟಿದೆ.
ರಾಷ್ಟ್ರಕವಿ ಕುವೆಂಪು ಅವರ ಕುರಿತು ಪಾಠ ಇರುವ 4ನೇ ತರಗತಿ 'ಪರಿಸರ ಅಧ್ಯಯನ' ಪುಸ್ತಕದ ಪರಿಷ್ಕರಣೆ ಆಗಿಲ್ಲ.
ರಾಜ್ಯ @BJP4Karnataka ಸರ್ಕಾರದ ಜನಪರ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ.
ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು ! pic.twitter.com/8oXgofvbda
— B.C Nagesh (@BCNagesh_bjp) May 24, 2022
ಹಾಗಾದರೆ, ಕುವೆಂಪು ಅವರಿಗೆ ಅವಮಾನವಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೊಬ್ಬೆ ಹಾಕಿದ್ದ ಬುದ್ಧಿಜೀವಿಗಳ ಗುಂಪು ಹಾಗೂ ಕೆಲವು ತಥಾಕಥಿತ ಕನ್ನಡ ಸಂಘಟನೆಗಳ ನೇತಾರರು ಈಗ ಆ ಆಕ್ರೋಶವನ್ನು ಬರಗೂರರ ವಿರುದ್ಧ ತಿರುಗಿಸುತ್ತಾರೆಯೇ ಎಂಬ ಪ್ರಶ್ನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಎದ್ದಿದೆ. ಅದಿಲ್ಲ ಎಂದಾದರೆ ಇವರೆಲ್ಲರದ್ದೂ ಪಠ್ಯದ ವಿಷಯದಲ್ಲಿ ಆಕ್ಷೇಪವಲ್ಲ ಬದಲಿಗೆ ವ್ಯಕ್ತಿಯಾಧಾರಿತ ದ್ವೇಷ ಎಂದಾಗುತ್ತದೆ ಅಲ್ಲವೇ ಎಂಬುದು ಪ್ರಜ್ಞಾವಂತರ ಪ್ರಶ್ನೆ.