ಹೊಸದಿಗಂತ ವರದಿ,ಕಾಸರಗೋಡು:
ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಹಠಾತ್ ರಜೆ ಮೇಲೆ ತೆರಳಿದ್ದಾರೆ. ಜನವರಿ 22ರಿಂದ ಫೆಬ್ರವರಿ 1ರ ವರೆಗೆ ರಜೆಯಲ್ಲಿರುವರು ಎಂದು ತಿಳಿದುಬಂದಿದೆ. ವೈಯಕ್ತಿಕ ಕಾರಣಕ್ಕಾಗಿ ರಜೆ ಮೇಲೆ ತೆರಳುತ್ತಿರುವುದಾಗಿ ಜಿಲ್ಲಾಧಿಕಾರಿ ವಿವರಣೆ ನೀಡಿದ್ದಾರೆ. ಎಡಿಎಂಗೆ ಜವಾಬ್ದಾರಿ ವಹಿಸಲಾಗಿದೆ. ಕೋವಿಡ್ ವ್ಯಾಪಿಸುತ್ತಿರುವ ಮಧ್ಯೆಯೇ ಜನವರಿ 21ರಂದು ಮಡಿಕೈಯಲ್ಲಿ ಆರಂಭಗೊಂಡ ಸಿಪಿಎಂ ಜಿಲ್ಲಾ ಸಮಾವೇಶದ ಸುತ್ತ ವಿವಾದ ತಾರಕಕ್ಕೇರಿದ್ದು , ಈ ನಡುವೆ ಜಿಲ್ಲಾಧಿಕಾರಿ ರಜೆ ಮೇಲೆ ತೆರಳಿರುವುದು ಹಲವು ಸಂಶಯಗಳಿಗೂ ಕಾರಣವಾಗಿದೆ.
ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮದ ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ ಬಳಿಕ ಕೆಲವೇ ಗಂಟೆಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳ ಮೇಲಿನ ನಿಷೇಧವನ್ನು ಹಿಂಪಡೆದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ಜಿಲ್ಲಾಧಿಕಾರಿಗಳು ಹೈಕೋರ್ಟ್ ನಿಂದಲೂ ಟೀಕೆ ಎದುರಿಸಿದ್ದರು. ನಂತರ ರಜೆಯ ಮೇಲೆ ತೆರಳಿದರು. ನಿರ್ಬಂಧಗಳನ್ನು ಹಿಂಪಡೆದಿರುವ ಜಿಲ್ಲಾಧಿಕಾರಿಗಳ ಆದೇಶ ಸ್ಪಷ್ಟವಾಗಿಲ್ಲ ಎಂದು ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿತ್ತು.
ಗುರುವಾರ ನಡೆದ ರಾಜ್ಯ ಮಟ್ಟದ ಕೋವಿಡ್ ಅವಲೋಕನಾ ಸಭೆಯ ನಂತರ ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ನಿಷೇಧಿಸಿದ್ದರು. ಆದರೆ ಎರಡು ಗಂಟೆಯೊಳಗೆ ನಿರ್ಧಾರವನ್ನು ಹಿಂತೆಗೆದುಕೊಂಡ ಅವರು ಕೆಲವು ವಿನಾಯಿತಿಗಳನ್ನು ಘೋಷಿಸಿದರು. ಸಿಪಿಎಂ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿರುವುದಾಗಿ ವ್ಯಾಪಕ ಆರೋಪ ಕೇಳಿಬಂದಿದೆ.