ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಅವರ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸುತ್ತಿದ್ದ ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್, ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಹಾಗು ಕೇಂದ್ರ ಸರಕಾರದ ಆಡಳಿತವನ್ನು ಶ್ಲಾಘಿಸುತ್ತಿದ್ದಾರೆ.
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಮಾಜಿ ವಿದ್ಯಾರ್ಥಿನಿ ಶೆಹ್ಲಾ, ನರೇಂದ್ರ ಮೋದಿ ಅವರು ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ಕೆಲಸ ಮಾಡುತ್ತಿರುವ ‘ನಿಸ್ವಾರ್ಥ ವ್ಯಕ್ತಿ’ ಎಂಬುದಾಗಿ ಬಣ್ಣಿಸಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆ ಜತೆ ಬುಧವಾರ ಮಾತನಾಡಿದ ಶೆಹ್ಲಾ ರಶೀದ್, ಪ್ರಧಾನಿ ಮೋದಿ ಒಬ್ಬ ನಿಸ್ವಾರ್ಥ ವ್ಯಕ್ತಿ ಮತ್ತು ಭಾರತಕ್ಕಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಹೆದರುವುದಿಲ್ಲ . ಪ್ರಧಾನಿ ತಮ್ಮ ವಿರುದ್ಧ ಅನೇಕ ಟೀಕೆಗಳನ್ನು ಎದುರಿಸಿದರು. ಆದರೆ ಅವರು ತಮ್ಮ ಅಭಿವೃದ್ಧಿ ಕಾರ್ಯಗಳಿಂದ ಹಿಂದೆ ಸರಿಯಲಿಲ್ಲ ಎಂದು ಶೆಹ್ಲಾ ಹೇಳಿದರು.
“ಪ್ರಸ್ತುತ ನಾವು ನಿಜಕ್ಕೂ ಒಳ್ಳೆ ಉದ್ದೇಶದ ಆಡಳಿತವನ್ನು ನೋಡುತ್ತಿದ್ದೇವೆ. ಪ್ರಧಾನ ಮಂತ್ರಿ- ಟೀಕೆಗಳ ಬಗ್ಗೆ ಅವರು ಚಿಂತೆ ಮಾಡುತ್ತಿಲ್ಲ. ಅವರು ತಮ್ಮ ಜನಪ್ರಿಯತೆಯನ್ನು ಕೂಡ ಪಣವಾಗಿಟ್ಟು, ಅನೇಕ ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರು ಟೀಕೆಗಳಿಗೆ ತಲೆಕೆಡಿಸಿಕೊಳ್ಳೊಲ್ಲ. ಅವರು ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ಕೆಲಸ ಮಾಡುತ್ತಿರುವ ನಿಸ್ವಾರ್ಥಿ. ನೀವು ಗೃಹ ಸಚಿವರ ಬಗ್ಗೆ ಮಾತನಾಡಿದರೆ- ಅವರು, ಆ ಸಮಯದಲ್ಲಿ ಯಾರು ಎಷ್ಟೇ ಟೀಕೆಗಳನ್ನು ಮಾಡಿದ್ದರೂ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ ಎಂದು ಹೊಗಳಿದ್ದಾರೆ.
ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೀತಿಗಳು ಕಾರಣ. ಪ್ರತಿಭಟನೆಗಳು ಮತ್ತು ಬಂಡಾಯ ಹಾಗೂ ಒಳ ನುಸುಳುವಿಕೆಯ ಘಟನೆಗಳಿಗೆ ರಾಜಕೀಯ ಪರಿಹಾರವನ್ನು ಅವರು ಖಾತರಿಪಡಿಸಿದ್ದಾರೆ ಎಂದಿದ್ದಾರೆ.
ಈ ಎಲ್ಲಾ ಸಂಗತಿಗಳಲ್ಲಿ, ಉದ್ವಿಗ್ನತೆಯನ್ನು ಶಮನಗೊಳಿಸಲು ಒಬ್ಬರು ಬೇಕಿದ್ದರು. ಅದಕ್ಕಾಗಿ, ಹಾಲಿ ಸರ್ಕಾರಕ್ಕೆ, ಮುಖ್ಯವಾಗಿ ಪ್ರಧಾನಿ ಹಾಗೂ ಗೃಹ ಸಚಿವರಿಗೆ ನಾನು ಶ್ರೇಯಸ್ಸು ಸಲ್ಲಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದ ಶೆಹ್ಲಾ ರಶೀದ್, 2019ರ ಅಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತ ಮಾನ್ಯತೆಯನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸುವ ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಕಳೆದ ತಿಂಗಳು ಕೂಡ ಶೆಹ್ಲಾ ರಶೀದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದರು. ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಪಡೆಗಳು ಗಾಜಾದಲ್ಲಿ ನಡೆಸುತ್ತಿರುವ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದ ಶೆಹ್ಲಾ, ನಾವು ಭಾರತೀಯರು ಅದೃಷ್ಟಶಾಲಿಗಳು ಎಂದಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲದಿಂದ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಂದು ಅವರು ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.