ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿ: ಕಾಶ್ಮೀರಿ ಪಂಡಿತ್‌ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಮ್ಮುಕಾಶ್ಮೀರದಲ್ಲಿ ಉಗ್ರರ ಆಟಾಟೋಪ ಮುಂದುವರೆದಿದ್ದು, ಶನಿವಾರ ಶೋಪಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದಲ್ಲಿನ ಪುರನ್ ಕ್ರಿಷ್ಣ ಭಟ್ ಅವರ ನಿವಾಸಕ್ಕೆ ನುಗ್ಗಿದ ಉಗ್ರರು ಅವರ ಮೇಲೆ ದಾಳಿ ನಡೆಸಿದ್ದಾರೆ. ತಕ್ಷಣವೇ ಭಟ್ ಅವರನ್ನು ಶೋಪಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಘಟನೆ ನಡೆದ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ಉಗ್ರರನ್ನು ಹಿಡಿಯಲು ಬೇಟೆ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ʼಭಟ್ ಅವರಿಗೆ ಶಾಲೆಗೆ ಹೋಗುವ ಇಬ್ಬರು ಎಳೆಯ ಮಕ್ಕಳಿದ್ದಾರೆ. ಮಗಳು 7 ನೇ ತರಗತಿಯಲ್ಲಿ ಓದುತ್ತಿದ್ದರೆ, ಮಗ 5 ನೇ ತರಗತಿಯಲ್ಲಿ ಓದುತ್ತಾನೆ. ತಂದೆಯ ದುರಂತ ಸಾವಿನಿಂದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ ಎಂದು ಸಂಬಂಧಿಕರೊಬ್ಬರು ಬೇಸರಿಸಿದ್ದಾರೆ. ಘಟನೆಯಿಂದ ನಾವು ತುಂಬಾ ಹೆದರಿದ್ದೇವೆʼ ಎಂದು ಅವರು ಹೇಳಿದರು.
ಕೆಲ ತಿಳಗಳ ಹಿಂದೆ ಶೋಪಿಯಾನ್ ಜಿಲ್ಲೆಯ ಸೇಬಿನ ತೋಟದಲ್ಲಿ ಕಾಶ್ಮೀರಿ ಪಂಡಿತರೊಬ್ಬರು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!