ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೊನಾದಿಂದ ಹೊರಬರುತ್ತಿರುವಾಗಲೇ ತಮಿಳುನಾಡಿನ ಜನತೆಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅಲ್ಲಿನ ಜನ ‘ಮದ್ರಾಸ್ ಐ’ನಿಂದ ಬಳಲುತ್ತಿದ್ದಾರೆ. ಈ ವರ್ಷ ಸೆಪ್ಟೆಂಬರ್ ಮೊದಲ ವಾರದಿಂದ ತಮಿಳುನಾಡಿನಲ್ಲಿ ‘ಮದ್ರಾಸ್ ಐ’ ವಿಜೃಂಭಿಸುತ್ತಿದೆ. ಕಣ್ಣು ಊದಿಕೊಳ್ಳುವುದು, ಕೆಂಪಾಗುವುದು ಮತ್ತು ನೀರು ಬರುವುದು ‘ಮದ್ರಾಸ್ ಐ’ ನ ಲಕ್ಷಣಗಳಾಗಿವೆ. ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ, ಇತರರು ನಾಲ್ಕು ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಮಾಡಬೇಕು ಎಂದು ತಮಿಳುನಾಡು ಸಚಿವ ಸುಬ್ರಹ್ಮಣ್ಯಂ ಹೇಳಿದ್ದಾರೆ.
ಅದರಲ್ಲೂ ಮಧುರೈನಲ್ಲಿ ‘ಮದ್ರಾಸ್ ಐ’ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಂಗಾರು ಹಂಗಾಮಿನಲ್ಲಿ ನಗರದಲ್ಲಿ ಭಾರೀ ಮಳೆಯಾಗುವುದರಿಂದ ಇದು ಪ್ರಚಲಿತದಲ್ಲಿರುವಂತಿದೆ. ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಸುಮಾರು 30 ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಿಗೂ ಸೋಂಕು ತಗಲುವ ಸಾಧ್ಯತೆ ಇದ್ದು, ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ವೈದ್ಯರು. ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಒಂದೇ ವಾರದಲ್ಲಿ 110ಕ್ಕೂ ಹೆಚ್ಚು ‘ಮದ್ರಾಸ್ ಐ’ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಈ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಆದರೆ, ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಇನ್ನು ಮೂರರಿಂದ ಐದು ದಿನಗಳಲ್ಲಿ ‘ಮದ್ರಾಸ್ ಐ’ ರೋಗದ ಲಕ್ಷಣಗಳು ಕಡಿಮೆಯಾಗಲಿವೆ ಎನ್ನಲಾಗಿದೆ. ಚೆನ್ನೈನಲ್ಲಿಯೂ ಈ ರೋಗದ ಹರಡುವಿಕೆ ಹೆಚ್ಚಾಗಿದೆ. ಈ ಬಗ್ಗೆ ತಮಿಳುನಾಡು ಆರೋಗ್ಯ ಇಲಾಖೆ ಈಗಾಗಲೇ ಜನರನ್ನು ಎಚ್ಚರಿಸಿದೆ. ಪ್ರತಿ ವರ್ಷ ಮಳೆಗಾಲದ ಕೊನೆಯಲ್ಲಿ ಈ ರೋಗ ಉಲ್ಬಣಗೊಳ್ಳುತ್ತದೆ.