ಕೊನೆಗೂ ಕೇಜ್ರಿವಾಲ್ ಗೆ ಜೈಲಿನಲ್ಲೇ ಇನ್ಸುಲಿನ್‌: ಎಲ್ಲವೂ ಹನುಮಾನ್‌ ದೇವರ ಆಶೀರ್ವಾದ ಎಂದ ಆಮ್‌ ಆದ್ಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ರಕ್ತದಲ್ಲಿ ಸಕ್ಕರೆ ಅಂಶ ಇಳಿದಿದ್ದರಿಂದಾಗಿ ಇನ್ಸುಲಿನ್‌ ನೀಡಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಆಮ್‌ ಆದ್ಮಿ ಪಕ್ಷ (ಎಎಪಿ) ಮಾಹಿತಿ ನೀಡಿದ್ದು, ‘ಹನುಮಾನ್‌ ಜಯಂತಿ ದಿನದಂದೇ ಆಗಿರುವ ಈ ಬೆಳವಣಿಗೆ ಸ್ವಾಗತಾರ್ಹ. ದೇವರ ಆಶೀರ್ವಾದದಿಂದಲೇ ಇದು ನಡೆದಿದೆ’ ಎಂದು ಪ್ರತಿಕ್ರಿಯಿಸಿದೆ.

‘ಏಮ್ಸ್‌ನ ತಜ್ಞವೈದ್ಯರ ಸಲಹೆಯಂತೆ ಸಂಜೆ ಕೇಜ್ರಿವಾಲ್ ಅವರಿಗೆ ಕಡಿಮೆ ಡೋಸ್‌ನ ಇನ್ಸುಲಿನ್‌ ನೀಡಲಾಯಿತು’ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 20ರಂದು ಕೇಜ್ರಿವಾಲ್ ಅವರೊಂದಿಗೆ ಏಮ್ಸ್ ಪರಿಣತರು ವಿಡಿಯೊ ಸಮಾಲೋಚನೆ ನಡೆಸಿದ್ದರು. ಅವರ ದೇಹದ ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾದರೆ ಇನ್ಸುಲಿನ್‌ ನೀಡಬೇಕು ಎಂದು ತಿಹಾರ್ ಜೈಲಿನ ವೈದ್ಯರಿಗೆ ಸಲಹೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಎಎಪಿ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ , ಪಕ್ಷದ ನಾಯಕನಿಗೆ ಜೈಲಿನಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಅವರನ್ನು ಬಂಧಿಸಿದ 23 ದಿನಗಳ ನಂತರ ಈಗ ಇನ್ಸುಲಿನ್‌ ನೀಡಲಾಗಿದೆ. ಹನುಮಾನ್‌ ದೇವರ ಆಶೀರ್ವಾದವೇ ಇದಕ್ಕೆ ಕಾರಣ ಎಂದು ಹೇಳಿದರು.

ಇನ್ನು ಸಚಿವೆ ಆತಿಶಿ ಈ ಕುರಿತಂತೆ ಎಕ್ಸ್ ಜಾಲತಾಣದಲ್ಲಿ, ‘ಹನುಮಾನ್‌ ಜಯಂತಿಯಂದು ಶುಭ ಸುದ್ದಿ ಬಂದಿದೆ. ತಿಹಾರ್‌ ಜೈಲಿನ ಅಧಿಕಾರಿಗಳು ಕೊನೆಗೂ ಇನ್ಸುಲಿನ್‌ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ನ್ಯಾಯಾಂಗ ಬಂಧನ 7ರವರೆಗೆ ವಿಸ್ತರಣೆ
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಬಿಆರ್‌ಎಸ್‌ ನಾಯಕಿ ಕೆ.ಕವಿತಾ ನ್ಯಾಯಾಂಗ ಬಂಧನವನ್ನು ಕೋರ್ಟ್ ಮೇ 7ರವರೆಗೆ ವಿಸ್ತರಿಸಿದೆ. ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರನ್ನು ಬಂಧಿಸಲಾಗಿದೆ. ಸಿಬಿಐ ಇ.ಡಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್‌ನ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ವರ್ಚುಯೆಲ್ ಕಲಾಪದಲ್ಲಿ ಈ ಕುರಿತ ಆದೇಶ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!