ಹೊಸದಿಗಂತ ಡಿಜಿಟಲ್ ಡೆಸ್ಕ್
ಉಗ್ರಗಾಮಿ ಚಟುವಟಿಕೆಗಳ ಆರೋಪ ಹೊತ್ತಿರುವ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರಿಗೆ ಕೇರಳದ ಅಗ್ನಿಶಾಮಕ ದಳ ಅಧಿಕಾರಿಗಳು ತರಬೇತಿ ನೀಡುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿದ್ದು, ಕೇರಳದಲ್ಲಿ ವಿವಾದ ಭುಗಿಲೆದ್ದಿದೆ. ಕೇರಳದ ಕೋಝಿಕ್ಕೋಡ್ ನಗರದಲ್ಲಿ ಕಳೆದವಾರ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. ಉಗ್ರವಾದದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಈ ಸಂಘಟನೆಯ ಕಾರ್ಯಕರ್ತರಿಗೆ ಬೆಂಕಿ ಆಕಸ್ಮಿಕಗಳಿಂದ ಪಾರಾಗುವುದು ಹೇಗೆ, ಬೆಂಕಿ ಶಮನಗೊಳಿಸುವುದು ಹೇಗೆ ಎಂಬೆಲ್ಲಾ ತರಬೇತಿಗಳನ್ನು ನೀಡುತ್ತಿರುವುದರ ಹಿಂದಿನ ಮರ್ಮವೇನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಕೆಂಪು – ಹಸಿರು ವಸ್ತ್ರದ ಸಮವಸ್ತ್ರ ಧರಿಸಿ ಪಿಎಫ್ಐ ಕಾರ್ಯಕರ್ತರು ಸಭೆಯಲ್ಲಿ ಕುಳಿತಿರುವ, ಅಧಿಕಾರಿಗಳು ಅವರಿಗೆ ತರಬೇತಿ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಸಹ ಈ ಚಿತ್ರವನ್ನು ಟ್ವೀಟರ್ ನಲ್ಲಿ ಹಂಚಿಕೊಂಡು ಕಿಡಿಕಾರಿದ್ದಾರೆ.
ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ದಳ ಅಧಿಕಾರಿಗಳು ಮೂಲಭೂತವಾದ ಬಿತ್ತುತ್ತಿರುವ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಿಗೆ ತರಬೇತಿ ನೀಡುತ್ತಿದ್ದಾರೆ. ಪಿಎಫ್ಐ ಮತ್ತು ಎಸ್ಡಿಪಿಐ ಈಗಾಗಲೇ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿವೆ. ಪಿಣರಾಯಿ ವಿಜಯನ್ ಕಮ್ಯುನಿಷ್ಟ್ ಸರ್ಕಾರ ಈ ಜಿಹಾದಿ ಶಕ್ತಿಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿದೆ ಎಂದು ಸುರೇಂದ್ರನ್ ಟ್ವೀಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಈ ಟ್ವಿಟ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿದ್ದಾರೆ.
Kerala Fire & Rescue Service gave training to the members of the radical Islamic outfit Popular Front of India. PFI and SDPI are involved in several terrorist activities. The @vijayanpinarayi govt is giving a red carpet for these Jihadi forces.@AmitShah ji. pic.twitter.com/LiKxAZQNO7
— K Surendran (@surendranbjp) March 31, 2022
ಈ ಘಟನೆಯ ಕುರಿತಾಗಿ ವರದಿ ಸಲ್ಲಿಸುವಂತೆ ಕೇರಳ ಸರ್ಕಾರವು ಅಗ್ನಿಶಾಮಕ ದಳದ ಡಿಜಿಪಿ ಬಿ ಸಂಧ್ಯಾ ಅವರಿಗೆ ಸೂಚಿಸಿದೆ. ಈ ಕುರಿತು ಸಂಧ್ಯಾ ಅವರು ತಮ್ಮ ವರದಿಯಲ್ಲಿ, ಇದು ಪಡೆಯ ಕಡೆಯಿಂದ ದೊಡ್ಡ ಲೋಪವಾಗಿದೆ ಎಂದು ಒಪ್ಮಪಿಕೊಂಡಿದ್ದಾರೆ ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರಿದ್ದಾರೆ.
ಕೋಝಿಕ್ಕೋಡ್ನಲ್ಲಿ ನಡೆದ ಪಿಎಫ್ಐನ ಸಾಂಸ್ಕೃತಿಕ ಉತ್ಸವಕ್ಕೆ ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಆ ವೇಳೆ ಸಂಘಟನೆಯ ಕೆಲವು ಕಾರ್ಯಕರ್ತರು ಅಗ್ನಿಶಾಮಕ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಕೋರಿದಾಗ ರಕ್ಷಣಾ ಪ್ರಯತ್ನಗಳ ಕುರಿತು ಕೆಲ ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
2000 ನೇ ಇಸವಿಯ ಆರಂಭದಲ್ಲಿ ಕೇರಳದಲ್ಲಿ ಸ್ಥಾಪನೆಯಾದ್ ಸ್ಥಾಪನೆಯಾದ ಫಿಎಫ್ ಐ ಸಂಘಟನೆಯು ಮೂಲಭೂತವಾದಿ ಸಂಘಟನೆಯಾಗಿದೆ. ಇದು ಹಲವಾರು ರಾಜ್ಯಗಳಲ್ಲಿಯೂ ತನ್ನ ಘಟಕಗಳನ್ನು ಹೊಂದಿದೆ. ಕರ್ನಾಟಕದಲ್ಲಿನ ಹಿಜಾಬ್ ವಿವಾದ ಸೇರಿದಂತೆ ಹಲವಾರು ಕುಕೃತ್ಯಗಳಲ್ಲಿ ಇದರ ಪಾತ್ರವನ್ನು ಶಂಕಿಸಲಾಗಿದೆ.
ಸೋಶಿಯಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಇಂಡಿಯಾ (SDPI) ಈ ಸಂಘಘಟನೆಯ PFI ಯ ರಾಜಕೀಯ ವಿಭಾಗವಾಗಿದೆ. ಕಳೆದ ತಿಂಗಳು, ಪೊಲೀಸ್ ಡೇಟಾಬೇಸ್ನಿಂದ ಎಸ್ಡಿಪಿಐ ಮುಖಂಡರಿಗೆ ಪ್ರಮುಖ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಇಡುಕ್ಕಿ ಜಿಲ್ಲೆಯಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಆಂತರಿಕ ತನಿಖೆಯ ವೇಳೆ ಕರಿಮನೂರು ಪೊಲೀಸ್ ಠಾಣೆಯ ಪಿ.ಕೆ.ಅನಾಸ್ ಜಿಲ್ಲೆಯ 150 ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತರ ವೈಯಕ್ತಿಕ ವಿವರಗಳನ್ನು ಎಸ್ಡಿಪಿಐಗೆ ಸೋರಿಕೆ ಮಾಡಿರುವ ಅಘಾತಕಾರಿ ಅಂಶವು ಪತ್ತೆಯಾಗಿತ್ತು.