ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ ಎನ್​ಐಎ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೋಯಿಕ್ಕೋಡ್​ ಎಲತ್ತೂರ್​ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದೋಷಾರೋಪಪಟ್ಟಿಯನ್ನು ಸಲ್ಲಿಸಿದೆ.

ಕೊಚ್ಚಿಯ ಎನ್​ಐಎ ನ್ಯಾಯಾಲಯಕ್ಕೆ ಅಧಿಕಾರಿಗಳು ದೋಷಾರೋಪಪಟ್ಟಿ ಸಲ್ಲಿಸಿದ್ದು, ಪ್ರಕರಣ ಪ್ರಮುಖ ಆರೋಪಿ ದೆಹಲಿ ಮೂಲಕ ಶಾರುಖ್​ ಸೈಫಿ ಎಂಬಾತ ಏಕಾಂಗಿಯಾಗಿ ಕೃತ್ಯ ಎಸಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏಪ್ರಿಲ್​ 02ರಂದು ಆರೋಪಿ ಶಾರುಖ್​ ಸೈಫಿ, ಆಲಪ್ಪುಳ – ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್​ಪ್ರೆಸ್​​ ರೈಲಿನಲ್ಲಿ ಪ್ರಯಾಣಿಕನೊಬ್ಬನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದನು. ಘಟನೆಯಲ್ಲಿ ಮೂವರು ಮೃತಪಟ್ಟು, 9 ಮಂದಿಗೆ ಸುಟ್ಟಗಾಯಗಳಾಗಿತ್ತು.

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶಾರುಖ್ ಸೈಫಿಯನ್ನು ಕೇಂದ್ರ ಗುಪ್ತಚರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.

ಆರೋಪಿಯು ಆನ್​ಲೈನ್​ನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಆಕರ್ಷಿತನಾಗಿ ಕೃತ್ಯ ಎಸಗಿದ್ದಾನೆ. ಜಿಹಾದಿ ಚಟುವಟಿಕೆಯ ಭಾಗವಾಗಿ ಆರೋಪಿಯು ಯೋಜನೆ ರೂಪಿಸಿ ರೈಲಿಗೆ ಬೆಂಕಿ ಹಚ್ಚಿದ್ದಾನೆ. ಅಪರಾಧದಿಂದ ಗುರುತಿಸಿಕೊಳ್ಳದಿರಲು ಆರೋಪಿಯು ಕೇರಳವನ್ನು ಆಯ್ಕೆ ಮಾಡಿದ್ದಾನೆ ಎಂದು ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕೃತ್ಯ ಎಸಗಿದ ಬಳಿಕ ಆರೋಪಿಯು ದೆಹಲಿಗೆ ತೆರಳಿ ಸಾಮಾನ್ಯನಂತೆ ಜೀವನ ನಡೆಸಲು ಯೋಜನೆ ರೂಪಿಸಿದ್ದ. ಈ ಬಗ್ಗೆ ಆರೋಪಿಯ ಹೇಳಿಕೆ ಮತ್ತು ದೂರವಾಣಿ ಕರೆಗಳಿಂದ ಕಲೆ ಹಾಕಿದ ಮಾಹಿತಿಯಿಂದ ತಿಳಿದುಬಂದಿದೆ ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!