ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಸಹೋದರ ಸಾಹಿಲ್ ಗೋಯಲ್ ಅವರನ್ನು ಪೊಲೀಸರು ಜೂನ್ 26 ರಂದು ಸುಮಾರು 10 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. “ಕೇತನ್ ಅಗರ್ವಾಲ್ ಜೊತೆಗಿನ ಮದುವೆ ಇಷ್ಟವಿಲ್ಲ ಎಂದು ಸಿಯಾ ಒಂದೇ ಒಂದು ಮಾತು ಹೇಳಿದ್ದರೂ ನಾವು ಆ ಮದುವೆಯನ್ನೇ ನಿಲ್ಲಿಸುತ್ತಿದ್ದೆವು” ಎಂದು ಸಾಹಿಲ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಬೆಳಿಗ್ಗೆಯಿಂದ ನಡೆದ ಸುದೀರ್ಘ ವಿಚಾರಣೆಯ ಬಳಿಕ ಸಂಜೆ ಅವರಿಗೆ ಮನೆಗೆ ಮರಳಲು ಅನುಮತಿ ನೀಡಲಾಗಿದ್ದು, ಈ ವೇಳೆ ಹಲವು ಪ್ರಮುಖ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ.
ವಿಗ್ ವಿವಾದ ತಿರಸ್ಕರಿಸಿದ ಕೇತನ್ ತಂದೆ
ಮತ್ತೊಂದೆಡೆ, ವರ ಕೇತನ್ ಅಗರ್ವಾಲ್ ತಂದೆ ವಿಶಾಲ್ ಅಗರ್ವಾಲ್ ಅವರು, “ನನ್ನ ಮಗ ವಿಗ್ ಬಳಸುತ್ತಿದ್ದದ್ದೇ ಕೊಲೆಗೆ ಕಾರಣ” ಎಂಬ ವಾದಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವೈದ್ಯಕೀಯ ಕಾರಣಗಳಿಂದಾಗಿ ಕೇತನ್ಗೆ ಸ್ವಲ್ಪ ಕೂದಲು ಉದುರಿತ್ತು. ಈ ವಿಷಯವನ್ನು ಮದುವೆ ನಿಶ್ಚಯವಾಗುವ ಮುನ್ನವೇ ಸಿಯಾಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
“ಒಂದೊಮ್ಮೆ ಸಿಯಾಗೆ ಈ ವಿಚಾರದಲ್ಲಿ ಆಕ್ಷೇಪವಿದ್ದಿದ್ದರೆ ಆಕೆಯೇ ಮದುವೆ ನಿರಾಕರಿಸಬಹುದಿತ್ತು. ಆಗ ನಾವೇ ವಿವಾಹವನ್ನು ರದ್ದುಗೊಳಿಸುತ್ತಿದ್ದೆವು” ಎಂದು ವಿಶಾಲ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಹೇಳಿಕೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ.



