ಮೈಸೂರು:
ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಅಲ್ಲಿದ್ದ 2 ಕೆ.ಜಿಗೂ ಹೆಚ್ಚು ಚಿನ್ನಾಭರಣ ಹಾಗೂ ಬೆಳ್ಳಿಯನ್ನ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ಸಾತಗಳ್ಳಿ ಬಸ್ ಡಿಪೋ ಬಳಿಯ ಗುರು ರಾಘವೇಂದ್ರ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದಿದೆ. ಅಂಗಡಿ ಮಾಲೀಕ ನಾಗರಾಜ್ ಕುಟುಂಬ ಮಧುಗಿರಿಗೆ ಜಾತ್ರೆಗೆ ತೆರಳಿದ್ದರು.
ರಾತ್ರಿ ವೇಳೆ ಎರಡು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು ಸುಮಾರು 2 ಕೆ.ಜಿ 150 ಗ್ರಾಂ ಚಿನ್ನ, 25 ಕೆಜಿ ಬೆಳ್ಳಿ ದೋಚಿದ್ದಾರೆ. ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಹಿತ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹಿಂದೆ ಮನೆ ಬಾಡಿಗೆಗೆ ಬಂದಿದ್ದ ಮಹಿಳೆಯೊಬ್ಬರ ಜತೆ ಮಾಲೀಕರಿಗೆ ವಿವಾದವಾಗಿತ್ತು. ಅದೇ ಮಹಿಳೆ ಮೇಲೆ ಮಾಲೀಕ ನಾಗರಾಜ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಮೈಸೂರು ಗ್ರಾಮಾಂತರ ಎ.ಎಸ್.ಪಿ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಖದೀಮರ ಸೆರೆಗೆ ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿದೆ.