-ಮಹಾಂತೇಶ ಕಣವಿ
ಧಾರವಾಡ: ಒಂದಡೆ ಭೀಕರ ಬಿಸಿಲಿನ ಕಾವು ಹೆಚ್ಚದೆ. ಮತ್ತೊಂದಡೆ 2024ರ ಲೋಕಸಭಾ ಚುನಾವಣೆ ಕಾವು ಏರತೊಡಗಿದೆ. ಹೀಗಾಗಿ ಚುನಾವಣಾ ಅಕ್ರಮ ತಡೆಗೆ ಜಿಲ್ಲೆಯ ಗಡಿಭಾಗದಲ್ಲಿ ತೆರೆದ ಚೆಕ್ಪೋಸ್ಟ್ಗಳಲ್ಲಿ ಪೊಲೀಸರ ಕಟ್ಟೆಚ್ಚರ ಬಿಗಿಗೊಳಿಸಿದೆ!
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆ ಜಿಲ್ಲೆಯ ವಿವಿಧ ಗಡಿಗಳಲ್ಲಿ ಒಟ್ಟು 24 ಚೆಕ್ಪೋಸ್ಟ್ ತೆರೆದಿದೆ. ದಿನದ 24 ಗಂಟೆಯೂ ತಪಸಣಾ ಕಾರ್ಯ ಸಕ್ರಿಯಗೊಳಿಸುವ ಮೂಲಕ ಅಕ್ರಮ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.
ಚುನಾವಣೆಯಲ್ಲಿ ಮತದಾರರಿಗೆ ಹಣ, ಸರಾಯಿ, ಸೀರೆ, ಕುಕ್ಕರ್ ಸೇರಿ ಇತ್ಯಾದಿ ಆಮಿಷ ಒಡ್ಡುವುದು ಸಹಜ. ಇದನ್ನು ಸವಾಲಾಗಿ ಪರಿಗಣಿಸಿದ ಚುನಾವಣಾ ಆಯೋಗವು ಕೂಡ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಲ್ಲ ಕ್ರಮ ಕೈಗೊಂಡಿದೆ.
24 ಚೆಕ್ಪೋಸ್ಟ್: ನವಲಗುಂದ ತಾಲೂಕು ರೋಣ ಕ್ರಾಸ್, ಅಣ್ಣಿಗೇರಿ-ಗದಗ ರಸ್ತೆ ಕೊಂಡಿಕೊಪ್ಪ ಕ್ರಾಸ್, ಹುಬ್ಬಳ್ಳಿ-ಅಣ್ಣಿಗೇರಿ ರಸ್ತೆ, ಕುಂದಗೋಳ-ಲಕ್ಷ್ಮೇಶ್ವರ ರಸ್ತೆಯ ಗುಡಗೇರಿ ಕ್ರಾಸ್, ಪುಣೆ-ಬೆಂಗಳೂರು ರಸ್ತೆಯ ತಡಸ ಕ್ರಾಸ್ ಬಳಿಯಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದೆ.
ಹುಬ್ಬಳ್ಳಿ-ಕುಂದಗೋಳ ರಸ್ತೆಯ ಶೇರೆವಾಡದಲ್ಲಿ. ಉಪ್ಪಿನಬೇಟಗೇರಿ, ಧಾರವಾಡ ಕೃಷಿ ವಿವಿ, ಹಾರೋಬೆಳವಡಿ, ಧಾರವಾಡ-ಸವದತ್ತಿ ರಸ್ತೆ, ನವಲಗುಂದ ರಸ್ತೆ, ಹೆಬ್ಬಳ್ಳಿ ಅಗಸಿ, ತೆಗೂರ, ಬೆಳಗಾವಿ-ಧಾರವಾಡ ರಸ್ತೆಯಲ್ಲಿ ಕೂಡ ಚೆಕ್ಪೋಸ್ಟ್ ಸ್ಥಾಪಿಸಿದೆ. ಗಬ್ಬೂರು ಕ್ರಾಸ್, ಕಾರವಾರ ರಸ್ತೆ, ಸೋನಿಯಾ ಗಾಂಧಿನಗರ, ಕುಂದಗೋಳ ರಸ್ತೆ, ಗದಗ ರಸ್ತೆ, ಗೋಕುಲ ಗ್ರಾಮದ ಕ್ರಾಸ್, ಕಲಘಟಗಿ ರಸ್ತೆ, ಸಂಗಟಿಕೊಪ್ಪ ರಸ್ತೆ ಹೀಗೆ ಚುನಾವಣಾ ಅಕ್ರಮ ಮೇಲೆ ಹದ್ದಿನ ಕಣ್ಣಿರಿಸಲು 24 ಚೆಕ್ಪೋಸ್ಟ್ ತೆರೆದಿದೆ.
ತಪಾಸಣೆ ಜೋರು: ಮತದಾರರಿಗೆ ಹಂಚಲು ಕೊಂಡೊಯ್ಯುವ ವಿವಿಧ ವಸ್ತುಗಳು, ಮದ್ಯ, ಹಣ ಸಾಗಾಣಿಕೆ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ದಾಖಲೆ ಇಲ್ಲದ ದೊಡ್ಡ ಪ್ರಮಾಣದ ವಸ್ತುಗಳ ಸಾಗಾಣಿಕೆಗೆ ಕಡಿವಾಣ ಹಾಕಿದೆ. ಅನುಮಾನಾಸ್ಪದ ವಾಹನ ತಪಸಾಣೆ ಜೋರಾಗಿದೆ.
ವಿಡಿಯೋ ಚಿತ್ರೀಕರಣ: ಚೆಕ್ಪೋಸ್ಟ್ಗಳಲ್ಲಿ ಸಶಸ್ತ್ರ ಸೀಮಾ ಬಲ, ಪೊಲೀಸ್, ಕಂದಾಯ, ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ದಿನದ 24 ಗಂಟೆ ಮೂರು ಶಿಪ್ಟ್ನಲ್ಲಿ ಕರ್ತವ್ಯ ನಿರ್ವಹಿಸಲಿದೆ. ಪ್ರತಿ ವಾಹನವು ತಪಾಸಣೆ ವೇಳೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.
ಕಾನೂನು ಕ್ರಮ: ಅಲ್ಲದೇ, ದಾಖಲೆ ಇಲ್ಲದ ರೂ.50 ಸಾವಿರಕ್ಕೂ ಮೇಲ್ಪಟ್ಟ ಹಣ ತೆಗೆದುಕೊಂಡು ಹೋದರೆ ವಶಕ್ಕೆ ಪಡೆಯಲಿದೆ. ತುರ್ತು ವೇಳೆಗೆ ಹಣ ಒಯ್ಯುವವರು ದಾಖಲೆ ಒದಗಿಸಲು ಸಾಧ್ಯವಾಗದಿದ್ದರೆ, ನಂತರ ದಾಖಲೆ ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ.
ಚುನಾವಣಾ ಅಕ್ರಮಗಳ ಮೇಲೆ ತೀವ್ರ ನಿಗಾ ವಹಿಸಿದೆ. ಇದಕ್ಕೆ ಜಿಲ್ಲೆಯ ವಿವಿಧ ಕಡೆಗೆ 24 ಚೆಕ್ಪೋಸ್ಟ್ ಸ್ಥಾಪಿಸಿ, ಕಟ್ಟೆಚ್ಚರ ವಹಿಸಿದೆ. ಕಂದಾಯ, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿ ನೇಮಿಸಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿದಿದ್ದಾರೆ.