ಕೆಐಎಡಿಬಿ ಸ್ವಾಧೀನಪಡಿಸಿದ ಜಮೀನಿಗೆ ಪರಿಹಾರ ನಿರಾಕರಿಸಿದವರಿಗೆ ಅಭಿವೃದ್ಧಿಪಡಿಸಿದ ಭೂಮಿ: ಸಚಿವ ನಿರಾಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೆಐಡಿಬಿಯಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ರೈತರು ನಗದು ಪರಿಹಾರ ಪಡೆಯದೇ ಇದ್ದಲ್ಲಿ, ಅಭಿವೃದ್ಧಿ ಪಡಿಸಿದ ನಿವೇಶನದಲ್ಲಿ ಪ್ರತಿ ಎಕರೆಗೆ 10,781 ಚದರಡಿ ಜಾಗವನ್ನು ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೊದಲು ಪ್ರತಿ ಎಕರೆಗೆ 9500 ಚದರ ಅಡಿ ಅಭಿವೃದ್ಧಿಪಡಿಸಿದ ಜಾಗವನ್ನು ಭೂ ಮಾಲೀಕರಿಗೆ ನೀಡಲಾಗುತ್ತಿತ್ತು. ಈಗ ಎಕೆರೆಗೆ 10,781 ಚದರಡಿ ಜಾಗ ನೀಡಲು ತೀರ್ಮಾನಿಸಲಾಗಿದೆ ಎಂದರು.

ಜಮೀನು ಕಳೆದುಕೊಂಡ ಕುಟುಂಬದ ಸದಸ್ಯರಲ್ಲಿ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸ್ಥಾಪಿಸಿದ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಭೂಮಿಯ ಬದಲಾಗಿ ಪರ್ಯಾಯ ಭೂಮಿ ನೀಡುವ ವ್ಯವಸ್ಥೆ ದೇಶದಲ್ಲಿ ಎಲ್ಲಿಯೂ ಜಾರಿಯಲ್ಲಿಲ್ಲ ಎಂದು ಉಪ ಪ್ರಶ್ನೆಯೊಂದಕ್ಕೆ ನಿರಾಣಿ ಉತ್ತರಿಸಿದರು.

ರಾಜ್ಯದಲ್ಲಿ 83,058 ಎಕರೆಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಮತ್ತು 79,017 ಎಕರೆಯನ್ನು ಏಕಘಟಕ ಸಂಕೀರ್ಣದಡಿ ಒಟ್ಟು 1,62,000 ಎಕರೆ ಜಮೀನನ್ನು ಕೆಐಎಡಿಬಿ ವಿವಿಧ ಜಿಲ್ಲೆಗಳಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ನಿರಾಣಿ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!