ಮೇಘನಾ ಶೆಟ್ಟಿ, ಶಿವಮೊಗ್ಗ
ಜೀವನದಲ್ಲಿ ಹಾಗಿರಬೇಕು, ಹೀಗಿರಬೇಕು ಎಂದೆಲ್ಲಾ ಎಣಿಸಿದ್ದೇ ಆಯ್ತು, ಎಲ್ರೂ ಅಂದುಕೊಂಡಂತೆಯೇ ಇದ್ದೀರಾ? ಒಂದು ದಿನ ಮುಂದೆ ಹೋದಾಗಲೂ ಛೇ ಇದನ್ನು ಮುಂಚೆಯೇ ಕಲಿತಿದ್ರೆ? ತಿಳಿದುಕೊಂಡಿದ್ರೆ ಅನ್ನೋ ಚಟಪಟಿಕೆ ಇದ್ದದ್ದೇ!
ಮಕ್ಕಳಿದ್ದಾಗ ತುಂಟಾಟ ಮಾಡದೇ ಗುಡ್ ಬಾಯ್/ ಗರ್ಲ್ ಅನಿಸಿಕೊಂಡಿದ್ದು, ಟೀನೇಜ್ಗೆ ಬಂದಾಗ ಓದೋದು ಬಿಟ್ಟು ಬೀದಿ ಅಲೆದದ್ದು, ನಂತರದ ದಿನಗಳಲ್ಲಿ ಟ್ರೂ ಲವ್ ಎಂದು ಯಾಮಾರಿದ್ದು? ಸರಿಯಾದ ಕರಿಯರ್ ಚಾಯ್ಸ್ ಮಾಡದೇ ಇದ್ದಿದ್ದು, ಮೋಸ ಮಾಡಿದವರನ್ನೇ ಪದೇ ಪದೆ ನಂಬಿದ್ದು, ನಮ್ಮವರೇ ತಾನೆ ಎಂದು ಎಲ್ಲವನ್ನೂ ಕ್ಷಮಿಸಿದ್ದು? ದುಡ್ಡೇ ಎಲ್ಲಾ, ದುಡ್ಡಿಲ್ದೇ ಏನೂ ಇಲ್ಲ ಎನ್ನೋದನ್ನು ಬಲವಾಗಿ ನಂಬಿದ್ದು??
ಸಾಕಷ್ಟು ತಪ್ಪುಗಳನ್ನು ಮಾಡಿದ್ದಾಯ್ತು, ಈ ತಪ್ಪುಗಳ ಜೊತೆಗೆ ಕಲಿಕೆಯೂ ಇದೆ, ಇವುಗಳನ್ನು ಮಾಡದೇ ಹೋದರೆ ನೀವು ನೀವಾಗೋದು ಹೇಗೆ? ತಿದ್ದಿದ್ದು ತೀಡಿದ್ದು ಎಲ್ಲವೂ ಸೇರಿಯೇ ನೀವಿಂದು ನೀವಾಗಿದ್ದೀರಿ! ಈಗ ಕೆಲವೊಂದು ತಪ್ಪು ಮಾಡಿ, ಮುಂದೆ ನಾನು ಅಂದು ಹಾಗೆ ಮಾಡಬಾರದಿತ್ತು ಎಂದುಕೊಳ್ಳಬೇಡಿ..ಈ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹಾಯಾದ ಜೀವನ ನಡೆಸಿ..
ಎಲ್ಲ ಸಮಸ್ಯೆಗೂ ದುಡ್ಡೇ ಸೊಲ್ಯೂಷನ್ ಅಲ್ಲ. ದುಡ್ಡು ಸಿಕ್ಕಿಬಿಡ್ಲಿ ಎಲ್ಲಾ ಪ್ರಾಬ್ಲಮ್ಸ್ ಮುಗಿದು ಹೋಗತ್ತೆ, ಆಗ ಆರಾಮಾಗಿ ಇರ್ತೀನಿ, ಈ ಮಾತು ಎಷ್ಟು ಜನದ ಬಾಯಲ್ಲಿ ಬಂದಿರೋದಿಲ್ಲ ಹೇಳಿ? ದುಡ್ಡು ಬಂದ ತಕ್ಷಣ ಎಲ್ಲ ಸಮಸ್ಯೆ ಮುಗಿದುಹೋಗೋದಿಲ್ಲ. ಸಮಸ್ಯೆಗಳು ಸದಾ ಇರುತ್ತದೆ. ಎದುರಿಸಬೇಕಷ್ಟೆ!
ನೀವು ಸೆಟಲ್ ಆಗೋದೇ ಇಲ್ಲ. ಹೌದು, ಸೆಟಲ್ ಆಗೋದು ಅಂದ್ರೇನು? ಹುಚ್ಚಾಪಟ್ಟೆ ಖರ್ಚು ಮಾಡುವಷ್ಟು ಹಣ, ಸ್ವಂತ ಮನೆ, ಸುತ್ತಾಡೋಕೆ ಕಾರು ಇದೇನಾ? ಸೆಟಲ್ ಆಗೋದು ಅಂದ್ರೆ? ನೆನಪಿಡಿ ಜೀವನದಲ್ಲಿ ನೀವೆಂದೂ ಸೆಟಲ್ ಆಗೋದಿಲ್ಲ. ಆ ದಿನದ ಸಂಘರ್ಷವನ್ನು ಬಡವನೂ ಎದುರಿಸಬೇಕು, ಶ್ರೀಮಂತನೂ ಎದುರಿಸಬೇಕು!
ಎಲ್ಲರಿಂದಲೂ ಗುಡ್ ಅನಿಸಿಕೊಳ್ಳೋಕೆ ಸಾಧ್ಯನಾ? ಎಷ್ಟೇ ಮಾಡಿದರೂ ನಿಮ್ಮ ಬಗ್ಗೆ ಮಾತನಾಡೇ ಆಡುತ್ತಾರೆ. ಅದಕ್ಕೆ ದುಃಖ ಬೇಡ. ನಿಮ್ಮ ಕರ್ತವ್ಯ ನೀವು ಮಾಡಿದರೆ ಸಾಕು. ಎಲ್ಲರನ್ನೂ ಯಾವಾಗಲೂ ಚೆನ್ನಾಗಿ ನೋಡಿಕೊಳ್ಳೋಕೆ ಆಗೋದಿಲ್ಲ ನೆನಪಿಡಿ!
ನಿಮ್ಮ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ನಿಮ್ಮ ಆರೋಗ್ಯ ನಿಮಗೇ ಗೊತ್ತಿಲ್ಲದಂತೆ ಕ್ಷೀಣಿಸುತ್ತಿದೆ. ಸರಿಯಾಗಿ ತಿನ್ನೋದಿಲ್ಲ, ನಿದ್ದೆಯಿಲ್ಲ. ವ್ಯಾಯಾಮಕ್ಕೆ ಸಮಯ ಇಲ್ಲ, ವೈದ್ಯ ಬಳಿ ಹೋಗೋಕೆ ಆಗೋದಿಲ್ಲ,ಸುಮ್ಮನೆ ದುಡ್ಡು ಖರ್ಚು ಮಾಡೋದಿಲ್ಲ ಒಂದಲ್ಲಾ ಹತ್ತು ಕಾರಣಗಳು.. ಹೀಗೆ ಮಾಡಿದರೆ ನಿಮ್ಮ ಆರೋಗ್ಯ ನಿಮಗೆ ಕೈಕೊಡೋದು ಗ್ಯಾರೆಂಟಿ
ನೀವು ಅಂದುಕೊಂಡಿದ್ದೆಲ್ಲಾ ನಿಮಗೆ ಸಿಗೋದಿಲ್ಲ. ಯಾವಾಗಲೂ ನನಗೆ ಸಿಕ್ಕರೆ ಖುಷಿ, ಇಲ್ಲವಾದರೂ ಪರವಾಗಿಲ್ಲ ಎನ್ನುವ ಮನೋಭಾವ ಇರಲಿ. ಸಿಕ್ಕಾಗ ಹಿಗ್ಗೋದು, ಸೋತಾಗ ನೆಲಕ್ಕೆ ಬೀಳುವುದು ಬೇಡ. ಖುಷಿ ಪಡಿ ದುಃಖವನ್ನೂ ಅನುಭವಿಸಿ. ಯಾವುದೂ ಅತಿಯಾಗೋದು ಬೇಡ ಅಷ್ಟೆ.
ಯಾವಾಗಲೂ ಎಲ್ಲವೂ ನಿಮ್ಮ ಬಗ್ಗೆಯೇ ಇರೋದಿಲ್ಲ. ಇಷ್ಟೊಂದು ಸ್ವಾರ್ಥ ಬೇಡ. ನಿಮ್ಮ ಪತಿ ಕಾಲುನೋವು ಎಂದರೆ ಆವತ್ತು ನಂಗೆ ಕಾಲು ನೋವಿತ್ತು ನೀವು ಕ್ಯಾರೆ ಅಂದಿಲ್ಲ ಎಂದು ಮಾತನಾಡೋದು ಬೇಡ. ನೋವಿನಲ್ಲಿ ಇರುವ ವ್ಯಕ್ತಿಗೆ ಮೊದಲು ಸ್ಪಂದಿಸಿ. ಸೆಲ್ಫಿಶ್ ಆಗಬೇಡಿ. ಬೇರೆಯವರ ಬಗ್ಗೆಯೂ ಆಲೋಚಿಸಿ.
ಗೊತ್ತಿಲ್ಲ ಎಂದು ಹೇಳೋಕೆ ನಾಚಿಕೆ ಯಾಕೆ? ಅದು ಸಣ್ಣ ಲೆಕ್ಕವೇ ಇರಬಹುದು ದೊಡ್ಡ ರಾಕೆಟ್ ಸೈನ್ಸ್ ಇರಬಹುದು. ನನಗೆ ಗೊತ್ತಿಲ್ಲ ಹೇಳಿಕೊಟ್ರೆ ತಿಳಿದುಕೊಳ್ತೇನೆ ಅನ್ನೋದ್ರಿಂದ ನೀವು ಚಿಕ್ಕವರಾಗೋದಿಲ್ಲ. ಜ್ಞಾನ ಹೆಚ್ಚಾಗದೇ ಇದ್ದಾಗ ಸಣ್ಣ ಬುದ್ದಿ ಆರಂಭವಾಗುತ್ತದೆ.
ಪ್ರೀತಿ ಒಂದು ಭಾವನೆಯಷ್ಟೇ ಅಲ್ಲ, ಅದು ನಿಮ್ಮ ಆಯ್ಕೆ ಕೂಡ. ಪ್ರೀತಿಸಿದವರನ್ನು ಕ್ಷಮಿಸಬೇಕಾ, ಬಿಡಬೇಕಾ? ಗೌರವ ಕೊಡಬೇಕಾ? ಇಲ್ಲವಾ? ಸಪೋರ್ಟ್ ಮಾಡಬೇಕಾ? ಇಲ್ಲವಾ? ಇದು ನಿಮ್ಮ ಆಯ್ಕೆ.ಪ್ರೀತಿ ಮಾಡಿದ್ದೇವೆ ಎನ್ನುವ ಒಂದೇ ಕಾರಣಕ್ಕೆ ಎಲ್ಲವನ್ನೂ ಒಪ್ಪಬೇಕಿಲ್ಲ.
ಬೇರೆಯವರ ಭಾವನೆಗಳ ಬಗ್ಗೆಯೂ ಗಮನ ಇರಲಿ. ನಿಮ್ಮ ತಲೆಯಲ್ಲಿ ಮುಂದಿನ ಸಾಲು ಫ್ರೇಮ್ ಆದಾಗ ಅದನ್ನು ಬಾಯಿಂದ ಹೊರಗೆ ಬಿಡಬೇಕಾ? ಬೇಡವಾ ಎನ್ನುವುದು ನಿಮಗೆ ಬಿಟ್ಟಿರುತ್ತದೆ. ಎದುರಿನವರ ಜಾಗದಲ್ಲಿ ನಿಂತು ಯೋಚಿಸುವುದು ತಪ್ಪಲ್ಲ. ಇದರಿಂದ ಎಷ್ಟೋ ಜಗಳ ತಪ್ಪುತ್ತದೆ.
ತಾಳ್ಮೆಗೆ ಅದರದ್ದೇ ಆದ ಶಕ್ತಿಯಿದೆ. ಎಲ್ಲರಿಗೂ ಕೋಪ ಬರುತ್ತದೆ ಆದರೆ ಕೋಪದಲ್ಲಿ ತಾಳ್ಮೆ ತೋರುವ ಶಕ್ತಿ ಕೆಲವರಿಗೆ ಮಾತ್ರ. ಆದಷ್ಟು ತಾಳ್ಮೆಯಿರಲಿ. ಜೀವನ ರೇಸ್ ಅಲ್ಲ.
ನಿಮ್ಮ ಕಂಫರ್ಟ್ ಝೋನ್ ನಿಮ್ಮ ಶತ್ರು. ಹೌದು, ಎಲ್ಲಿಯವರೆಗೆ ಕಂಫರ್ಟ್ ಝೋನ್ನಲ್ಲಿ ಕುಳಿತು ಕಾಲಹಾಕುತ್ತೀರೋ ಅಲ್ಲಿಯವರೆಗೆ ನೀವು ಬಾವಿ ಕಪ್ಪೆ ಅಷ್ಟೆ. ಒಮ್ಮೆ ಸಮುದ್ರಕ್ಕೆ ಹಾರಿ, ಕಷ್ಟ, ನಷ್ಟ, ಸುಖ ಹಾಗೂ ಅನುಭವಗಳು ನಿಮ್ಮದಾಗುತ್ತದೆ.