ಹೊಸದಿಗಂತ ವರದಿ, ಕುಶಾಲನಗರ
ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಬೆಳೆದ ಬೆಳೆಗಳು ಕಾಡಾನೆಗಳ ಪಾಲಾಗಿವೆ.
ಹುದುಗೂರು ಮತ್ತು ಬಾಣಾವರ ಮೀಸಲು ಅರಣ್ಯ ಪ್ರದೇಶದಿಂದ ಬಂದಿರುವ ಒಂದು ಮರಿ ಸಹಿತ ಆರು ಕಾಡಾನೆಗಳ ಹಿಂಡು ಸೀಗೆಹೊಸೂರು ಮತ್ತು ಹುಣಸೆಪಾರೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿದ್ದು, ರೈತರ ಜಮೀನಿಗೆ ದಾಳಿ ಮಾಡಿ ಇದೀಗ ಬಿತ್ತನೆ ಮಾಡಿರುವ ಶುಂಠಿ ಮತ್ತು ಸಿಹಿ ಗೆಣಸು, ಬಾಳೆಗಿಡಗಳನ್ನು ತುಳಿದು, ತಿಂದು ಭಾರೀ ನಷ್ಟ ಉಂಟು ಮಾಡಿವೆ.
ಸೀಗೆಹೊಸೂರು ಗ್ರಾಮದ ಜಿ.ಕೆ.ಮೇದಪ್ಪ, ಶಾಂತಳ್ಳಿ ಜಗದೀಶ್, ವೀರಪ್ಪ ರಾಜಣ್ಣ, ಮೋಹನ್, ಶಂಕರ್ ಸೇರಿದಂತೆ ಹತ್ತಕ್ಕೂ ಅಧಿಕ ರೈತರ ಜಮೀನಿಗೆ ದಾಳಿ ಮಾಡಿರುವ ಕಾಡಾನೆಗಳು, ರೈತರು ಬೆಳೆದ ಬೆಳೆ ಮತ್ತು ನೀರಾವರಿ ವ್ಯವಸ್ಥೆಗೆ ಅಳವಡಿಸಿರುವ ಪೈಪ್’ಗಳನ್ನು ತುಳಿದು ಪುಡಿ ಪುಡಿ ಮಾಡಿವೆ.
ಸ್ಧಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ