ಹೊಸದಿಗಂತ ವರದಿ, ಮಡಿಕೇರಿ:
ಮಡಿಕೇರಿ ನಗರವನ್ನು ಬಾಂಬ್ ಹಾಕಿ ಸ್ಫೋಟಿಸುವ ಸಂಚು ನಡೆಸಿದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅವರು, ಶಾಂತಿಯುತ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸಲು ಯೋಜನೆ ರೂಪಿಸಿರುವ ಮಡಿಕೇರಿ ನಗರ ಸಭೆಯ ಜೆ.ಡಿ.ಎಸ್. ಸದಸ್ಯ ಮುಸ್ತಾಫ ಹಾಗೂ ಬೆಟ್ಟಗೇರಿಯ ಅಬ್ದುಲ್ಲಾ ಅವರುಗಳಿಗೆ ತಕ್ಕ ಶಿಕ್ಷೆಯಾಗಲೇಬೇಕೆಂದು ಆಗ್ರಹಿಸಿದಾರೆ.
ಮಡಿಕೇರಿ ನಗರದ ಮತದಾರರಿಂದ ಆಯ್ಕೆಯಾದ ಜೆಡಿಎಸ್’ನ ಜನ ಪ್ರತಿನಿಧಿ ಮುಸ್ತಾಫ, ತನ್ನನ್ನು ಆಯ್ಕೆ ಮಾಡಿದ ನಗರದ ಜನತೆಯನ್ನೇ ಪೆಟ್ರೋಲ್ ಬಾಂಬ್ ಹಾಕಿ ಕೊಲ್ಲುವ ಮಾತನಾಡಿರುವುದು ಇವರ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸಿದೆ.
ಮುಸ್ತಫಾ ಮತ್ತು ಅಬ್ದುಲ್ಲಾ ಎಂಬಿಬ್ಬರು ವ್ಯಕ್ತಿಗಳು ಮಡಿಕೇರಿ ನಗರ ಸೇರಿದಂತೆ ಕೊಡಗಿನಲ್ಲಿ ಅಮಾಯಕ ಹಿಂದೂಗಳ ಮಾರಣ ಹೋಮ ನಡೆಸಲು ತಯಾರಿ ನಡೆಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿದೆ. ಇವರ ಮಾತಿನ ಪ್ರಕಾರ ಇವರು ಹಿಂದೂಗಳ ನರಮೇಧಕ್ಕೆ ಬೇಕಾಗುವ ಹಣವನ್ನು ಕೂಡಾ ಮುಸ್ಲಿಮರಿಂದ ಕ್ರೋಢೀಕರಿಸಿ ಜಿಲ್ಲೆಯ 50 ಕಡೆಗಳಲ್ಲಿ ಪೆಟ್ರೋಲ್ ಬಾಂಬ್ ಬಳಸಿ ಹಿಂದೂಗಳನ್ನು ಕೊಲ್ಲಲು ಯೋಜನೆ ರೂಪಿಸಿರುವುದು ಇವರಿಬ್ಬರ ಆಡಿಯೋ ಸಂಭಾಷಣೆಯಲ್ಲಿ ಸ್ಪಷ್ಟ ಮಾತುಗಳಲ್ಲೇ ಕೇಳಬಹುದಾಗಿದೆ. ಮುಸ್ತಾಫ ಒಬ್ಬ ಜವಾಬ್ಧಾರಿಯುತ ಜನಪ್ರತನಿಧಿಯಾಗಿ, ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಆಡಿರುವ ಮಾತು ನಿಜಕ್ಕೂ ಅಪಾಯಕಾರಿ ಎಂದು ಮಹೇಶ್ ಜೈನಿ ಅಭಿಪ್ರಾಯಪಟ್ಟಿದ್ದಾರೆ.
ಹೆಚ್’ಡಿಕೆ ಉತ್ತರಿಸಲಿ:
ಜೆಡಿಎಸ್ ಪಕ್ಷ ಗಲಭೆಕೋರರಿಗೆ ತರಬೇತಿ ಕೊಟ್ಟು ಸಮಾಜದ ಶಾಂತಿಯನ್ನು ಕದಡಿ ಹಿಂದೂಗಳ ಜೀವದ ಜೊತೆ ಚೆಲ್ಲಾಟವಾಡಿ ರಾಜಕೀಯ ಲಾಭ ಗಳಿಸಲು ಹವಣಿಸುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಹಿಂದೆ ಒಬ್ಬ ಅಮಾಯಕ ಹಿಂದೂ ಮಾಜಿ ಸೈನಿಕ ಮತ್ತು ಆತನ ಕುಟುಂಬದ ಮೇಲೆ ಜೆಡಿ ಎಸ್’ನ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದು, ಇದೀಗ ಅದೇ ಪಕ್ಷದ ಚುನಾಯಿತ ಪ್ರತಿನಿಧಿ ಮತ್ತು ಆತನ ಸಹಚರ ಜಿಲ್ಲೆಯ ಬಹು ಸಂಖ್ಯಾತರ ಮೇಲೆ ಬಾಂಬ್ ದಾಳಿಗೆ ಯೋಜನೆ ರೂಪಿಸಿರುವುದಕ್ಕೆ ಜೆಡಿಎಸ್ ಪಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಬೇಕೆಂದು ಮಹೇಶ್ ಜೈನಿ ಒತ್ತಾಯಿಸಿದ್ದಾರೆ.
ಸ್ಥಳೀಯ ಹಿಂದೂಗಳೊಂದಿಗೆ ಅನೋನ್ಯತೆಯಿಂದ ಇರುವಂತೆ ನಾಟಕವಾಡುತ್ತಾ, ತಮ್ಮ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಈ ಇಬ್ಬರು ಗೋಮುಖ ವ್ಯಾಗ್ರಗಳೊಂದಿಗೆ ಹಿಂದೂ ಸಮಾಜ ಎಚ್ಚರದಿಂದ ಇರುವಂತೆಯೂ ಜಿಲ್ಲಾ ಬಿಜೆಪಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಕದಡುವ ಇಂತಹ ಪ್ರಕಣಗಳನ್ನು ಎನ್’ಐಎಗೆ ವಹಿಸುವುದರ ಮೂಲಕ ಇಂತಹ ಯೋಜನೆಗಳನ್ನು ಮಟ್ಟ ಹಾಕಬೇಕೆಂದು ಜಿಲ್ಲಾ ಬಿಜೆಪಿ ಆಗ್ರಹಿಸುತ್ತಿರುವುದಾಗಿ ಮಹೇಶ್ ಜೈನಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ