ಹೊಸದಿಗಂತ ವರದಿ,ಶಿವಮೊಗ್ಗ:
ಮೇಕೆದಾಟು ಯೋಜನೆ ಸಂಬಂಧ ನಡೆಸುತ್ತಿದ್ದ ಪಾದಯಾತ್ರೆಯನ್ನು ರದ್ದು ಮಾಡುವ ಸಲುವಾಗಿಯೇ ಸರ್ಕಾರ ಬೋಗಸ್ ಪರೀಕ್ಷಾ ವರದಿ ನೀಡಿದೆ ಎಂದು ಹೇಳುವ ಕೆಪಿಸಿಸಿ ಅಧ್ಯಕ್ಷರ ಬಳಿಯಲ್ಲಿ ಅಂತಹ ದಾಖಲೆ ಇದ್ದರೆ ಸರ್ಕಾರಕ್ಕೆ ಸಲ್ಲಿಸಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ದಾಖಲೆ ಸಲ್ಲಿಸಿದರೆ ಅವುಗಳ ಪರಿಶೀಲನೆ ನಡೆಸಲಾಗುತ್ತದೆ. ಸರ್ಕಾರದ ಬಳಿ ಇರುವ ದಾಖಲೆಗಳನ್ನು ನೀಡಲಾಗುತ್ತದೆ. ನಾನು ಒಬ್ಬನೇ ಸರ್ಕಾರದಲ್ಲಿ ಇಲ್ಲ. ಅನೇಕ ಸಚಿವರು, ಶಾಸಕರು, ಅಧಿಕಾರಿಗಳು, ತಜ್ಞರು ಕೂಡ ಇದ್ದಾರೆ ಎಂದರು.
ಗೃಹ ಸಚಿವರು ಮಂತ್ರಿ ಸ್ಥಾನದಲ್ಲಿ ಎಳಸು ಎಂದು ಮಾತುಮಾತಿಗೆ ಹೇಳುವ ಅವರು, ರಾಜಕೀಯದಲ್ಲಿ ಅನುಭವಿಗಳು, ಹಿರಿಯರಿದ್ದಾರೆ. ಅವರ ಬಳಿ ದಾಖಲೆ ನೀಡಿ ಸಮರ್ಥನೆ ಮಾಡಿಕೊಳ್ಳಲಿ ಎಂದ ಅವರು, ಕಾಂಗ್ರೆಸ್ ಪಾದಯಾತ್ರೆ ಕೈಗೊಂಡ ಬಳಿಕ ರಾಮನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು, ಪರೀಕ್ಷಾ ವರದಿಯಿಂದ ದೃಢಪಟ್ಟಿದೆ ಎಂದರು.
ಅಪರಾಧ ಪ್ರಕರಣ ಹಾಗೂ ಆರೋಪಿಗಳ ತ್ವರಿತ ಪತ್ತೆಗಾಗಿ ರಾಜ್ಯದಲ್ಲಿ ಫೋರೆನ್ಸಿಕ್ ಲ್ಯಾಬ್ಗಳ ಹೆಚ್ಚಳ ಮಾಡಲು ಕ್ರಮಕೈಗೊಂಡಿದ್ದು, ಈಗಾಗಲೆ ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಎರಡು ನೂತನ ಲ್ಯಾಬ್ ತೆರೆಯಲಾಗಿದೆ. 200 ವಿಜ್ಞಾನಿಗಳ ನೇಮಕ ಕೂಡ ಮಾಡಲಾಗಿದೆ. ಶಿವಮೊಗ್ಗ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿಯೂ ಲ್ಯಾಬ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಆದರೆ ಕೋವಿಡ್ನಿಂದಾಗಿ ವಿಳಂಬವಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.