ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪ್ಪೆನ ಚಿತ್ರದ ಮೂಲಕ ಎಂಟ್ರಿ ಕೊಟ್ಟು, ಶ್ಯಾಮ್ ಸಿಂಗರಾಯ್, ಬಂಗಾರ್ರಾಜು ಚಿತ್ರದ ಮೂಲಕ ಅಭಿಮಾನಿಗಳನ್ನು ಮೆಚ್ಚಿಸಿ ಹ್ಯಾಟ್ರಿಕ್ ಬಾರಿಸಿದ್ದ ಕನ್ನಡದ ಚೆಲುವೆ ಕೃತಿ ಶೆಟ್ಟಿ ಇದೀಗ ಬಹುಬೇಡಿಕೆ ನಟಿಯಾಗಿದ್ದಾರೆ. ಸುಧೀರ್ ಬಾಬು, ನಿತಿನ್, ರಾಮ್ ಹಾಗೂ ತಮಿಳಿನ ಸೂರ್ಯ ಜೊತೆ ಸಿನಿಮಾ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಕೃತಿ ಇತ್ತೀಚೆಗೆ ತಮಿಳು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ತಮಿಳು ಪ್ರಾಂಕ್ ಯೂಟ್ಯೂಬರ್ಗಳು ಆಶಿಕ್ ಮತ್ತು ಸಾರಥಿರಾನ್ ನಾಯಕಿಯನ್ನು ಸಂದರ್ಶನ ಮಾಡುವುದಾಗಿ ತಿಳಿಸಿದರು. ಆದರೆ, ನಾನು ಮೊದಲು ನಾನು ಮೊದಲು ಎಂದು ಇಬ್ಬರೂ ಪರಸ್ಪರ ಕಿಚಾಯಿಸಿದರು. ಗಲಾಟೆ ಮಾಡುತ್ತಾ ಕೃತಿಗೆ ಪ್ರಶ್ನೆಗಳನ್ನು ಕೇಳಲು ಮುಂದಾದರು. ಮಾತು ಗಲಾಟೆ ಹಂತಕ್ಕೆ ಹೋಗಿ ಹೊಡೆದಾಡುವ ಮಟ್ಟ ತಲುಪಿತು. ಕೆಲ ಕಾಲ ಅಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗದೆ ನಟಿ ಗಾಬರಿಗೊಂಡರು. ಕೊನೆಗೆ ಇದೆಲ್ಲ ಪ್ರಾಂಕ್ ಎಂದು ತಿಳಿದ ಕೃತಿಶೆಟ್ಟಿ ನಗೆ ಬೀರಿ ಒಮ್ಮೆಲೆ ಅತ್ತುಬಿಟ್ಟರು. ಕೃತಿ ಕಣ್ಣಿರಿಟ್ಟ ದೃಶ್ಯ ಲೈವ್ನಲ್ಲಿ ಪ್ರಸಾರವಾಗಿದ್ದು ಎಲ್ಲೆಡೆ ವೈರಲ್ ಆಗಿದೆ.
ಈ ರೀತಿ ನಿಮ್ಮ ಪಬ್ಲಿಸಿಟಿಗಾಗಿ ನಾಯಕಿಯನ್ನು ಗೊಂದಲ ಪಡಿಸಿ ಕಣ್ಣೀರು ಹಾಕಿಸುವುದು ಸರಿಯಲ್ಲ ಎಂದು ನಟಿ ಅಭಿಮಾನಿಗಳು ಹಾಗೂ ನೆಟ್ಟಿಗರು ಕಿಡಿ ಕಾರಿದ್ದಾರೆ.