ಹೊಸದಿಗಂತ ವರದಿ ರಾಣೇಬೆನ್ನೂರ:
ಬೆಂಗಳೂರಿನಿಂದ ಗದಗ ಕಡೆ ಹೊರಟಿದ್ದ ಕೆಎಸ್ಆರ್ಟಿಸಿ ಪಲ್ಲಕ್ಕಿ ಬಸ್ ಕ್ಷಣಾರ್ಧದಲ್ಲೇ ಧಗಧಗನೆ ಉರಿದು ಸಂಪೂರ್ಣ ಸುಟ್ಟುಕರಕಲಾದ ಘಟನೆ ದೇವರಗುಡ್ಡ ಬಳಿ ಇಂದು ಬೆಳಗ್ಗೆ ನಡೆದಿದೆ.
ರಾಣೇಬೆನ್ನೂರಿನಿಂದ ಗದಗ ಕಡೆ ಹೊರಟ ಬಸ್ನಲ್ಲಿ 15 ಜನ ಪ್ರಯಾಣಿಕರು ಇದ್ದರು.ಬಸ್ನಲ್ಲಿ ಇದ್ದಕ್ಕಿದ್ದಂತೆಯೇ ಟೈರ್ ಸುಟ್ಟ ವಾಸನೆ ಬಂದಿದೆ. ನಂತರ ಚಾಲಕ ಬಸ್ನಿಂದ ಕೆಳಕ್ಕೆ ಇಳಿದು ನೋಡಿದಾಗ ಬ್ರೇಕ್ ಲೈನರ್ ಟೈರ್ಗೆ ತಗುಲಿ ಟೈರ್ ಹೀಟಾಗಿ ಬೆಂಕಿ ಹೊತ್ತಿದೆ.
ಇದನ್ನು ಕಂಡ ಚಾಲಕ ತಕ್ಷಣವೇ ಎಲ್ಲ ಪ್ರಯಾಣಿಕರನ್ನೂ ಕೆಳಕ್ಕೆ ಇಳಿಯುವಂತೆ ಸೂಚಿಸಿದ್ದಾರೆ. ಜನ ಕೆಳಗಿಳಿದ ತಕ್ಷಣವೇ ಬಸ್ ಹೊತ್ತಿ ಉರಿದಿದೆ. ಚಾಲಕ ಸಮಯಪ್ರಜ್ಞೆಯಿಂದ ಜನರನ್ನು ಕೆಳಕ್ಕಿಳಿಸಿ ಸಂಭವಿಸುತ್ತಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಅವರೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಸಾರಿಗೆ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಈ ಕುರಿತು ರಾಣೇಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.



