ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ನವರು ಕೂಸು ಹುಟ್ಟವ ಮುಂಚೆ ಕುಲಾವಿ ಹೊಲಿಸಿದರಂತಾಗಿದೆ. ಬಹುಮತ ಪಡೆಯದೆ ದಲಿತರಿಗೆ ಮುಖ್ಯಮಂತ್ರಿ ನೀಡುತ್ತೇವೆ ಎನ್ನುತ್ತಿದ್ದಾರೆ. 2018 ರಲ್ಲಿ ಅವಕಾಶವಿದ್ದರು ಸಹ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ನೀಡಲಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರ ಅಸ್ತ್ರವನ್ನು ಈಗಲು ಪ್ರಯೋಗಿಸುತ್ತಿದ್ದಾರೆ. ದಲಿತರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಕೈಯಲ್ಲಿದ್ದಾಗ ಏನೂ ಮಾಡದವರು, ಈಗ ಮಾಡುತ್ತಾರೆಯೇ? ಇದೆಲ್ಲ ಸಮಯಸಾಧಕ ರಾಜಕಾರಣವಷ್ಟೆ ಎಂದರು.
ಹಾಸನ ಟಿಕೆಟ್ ಗೊಂದಲವಿಲ್ಲ. ಎಲ್ಲವೂ ಮಾಧ್ಯಮ ಸೃಷ್ಟಿ. ಏನೂ ಚರ್ಚೆಯಾಗದಿದ್ದರೆ ನಾನು ಹೇಳುವುದು ಏನಿದೆ? ನಾನು ಮಾಧ್ಯಮದಲ್ಲಿ ಏನು ಬಂದಿದೆ ಎಂಬುದಕ್ಕಿಂತ
ನಮ್ಮ ಕುಟುಂಬದ ವ್ಯಕ್ತಿ ಮೇಲೆ ಸವಾಲು ಹಾಕಿದ ವ್ಯಕ್ತಿಗೆ ಉತ್ತರ ಕೊಡಲು ಒಂದೂವರೆ ವರ್ಷದಿಂದ ಪ್ರಯತ್ನ ಮಾಡುತ್ರಿದ್ದೇನೆ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುವ ಬಗ್ಗೆ ಆಗಲೇ ಸುಳಿವು ನೀಡಿದ್ದೆ ಎಂದು ಹೇಳಿದರು.
ರೇವಣ್ಣ ಎರಡು ಕಡೆ ನಿಲ್ಲುವ ಬಗ್ಗೆ ಚರ್ಚೆ ಆಗಿಲ್ಲ. ಹಾಸನದಲ್ಲಿ ಸಧೃಡ ಕಾರ್ಯಕರ್ತರು ಇದ್ದಾರೆ. ಅವರ ಅಭಿಪ್ರಾಯಕ್ಕೆ ಬೆಲೆ ಕೊಟ್ಟರೆ ಗೆಲುವು ಸರಾಗ. ಇಲ್ಲಿ ನನ್ನ ಮತ್ತು ರೇವಣ್ಣ ಕುಟುಂಬದ ಪ್ರತಿಷ್ಠೆ ಮುಖ್ಯವಲ್ಲ. ಅದಕ್ಕಿಂತ, ಪಕ್ಷದ ಗೆಲುವು ಮುಖ್ಯ. ಅಲ್ಲಿನ ವಾಸ್ತವ ಮತ್ತು ಜನಾಭಿಪ್ರಾಯ ಗಮನಿಸಿ ಹೇಳುತ್ರಿರುವೆ. ಗೆಲುವಿಗಿಂತ ಪ್ರತಿಷ್ಠೆಯೇ ಮುಖ್ಯವಾದರೆ ಏನೂ ಮಾಡಲಾಗದು ಎಂದು ತಿಳಿಸಿದರು.