ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಿ ಪಾರಂ ಪಡೆದು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಈ ಮಧ್ಯೆ, ಜೆಡಿಎಸ್ (JDS) ಹಾಸನ ಕ್ಷೇತ್ರದ ಟಿಕೆಟ್ ಘೋಷಣೆ ಮುನ್ನವೇ ಬಿ ಪಾರಂ ನೀಡಿದ್ದಾರೆ.
ಹಾಸನ ಕ್ಷೇತ್ರಕ್ಕೆ ಹೆಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ರೇವಣ್ಣ ಹಾಗೂ ಕುಮಾರಸ್ವಾಮಿ ಮಧ್ಯೆ ಟಿಕೆಟ್ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಉಭಯರೂ ತಮ್ಮ ಕಡೆಯವರಿಗೇ ಟಿಕೆಟ್ ಸಿಗಬೇಕೇಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ, ಹೆಚ್ಡಿ ಕುಮಾರಸ್ವಾಮಿ ಅವರು ಸ್ವರೂಪ್ಗೆ (Swaroop) ಶುಕ್ರವಾರ ಬಿ ಫಾರಂ ನೀಡಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ನಡೆಯುತ್ತಿದ್ದು, ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಅರಮನೆ ಶಂಕರ್, ಯಾದಗಿರಿ ಜಿಲ್ಲೆ ಶಹಾಪುರ ಕ್ಷೇತ್ರದ ಅಭ್ಯರ್ಥಿ ಗುರುಪಾಟೀಲ್ ಸೇರಿದಂತೆ ಅನೇಕ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ. ಇದೇ ವೇಳೆ ಹಾಸನದ ಅಭ್ಯರ್ಥಿ ಘೋಷಣೆಯಾಗದಿದ್ದರೂ ಸ್ವರೂಪ್ಗೆ ಬಿ ಫಾರಂ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವ ಕಾರಣ ಜೆಡಿಎಸ್ ಇನ್ನೂ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಅತ್ತ ಹಾಸನ ಕ್ಷೇತ್ರದ ಟಿಕೆಟ್ ಅನ್ನು ಭವಾನಿ ರೇವಣ್ಣ ಅವರಿಗೆ ಕೊಡದಿದ್ದರೆ ತಮಗೂ ಹೊಳೆನರಸೀಪುರ ಕ್ಷೇತ್ರದ ಟಿಕೆಟ್ ಬೇಡ ಎಂದು ಹೆಚ್ಡಿ ರೇವಣ್ಣ ಪಟ್ಟುಹಿಡಿದಿದ್ದಾರೆ. ಮತ್ತೊಂದೆಡೆ, ಸಾಮಾನ್ಯ ಕಾರ್ಯಕರ್ತನಿಗೇ ಹಾಸನದ ಟಿಕೆಟ್ ನೀಡುತ್ತೇನೆ ಎಂಬ ನಿಲುವಿಗೆ ಬದ್ಧ ಎಂದು ಹೆಚ್ಡಿ ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ. ಈ ನಡುವೆ ಸ್ವರೂಪ್ಗೆ ಬಿ ಫಾರಂ ನೀಡಿರುವುದು ಕುತೂಹಲ ಹೆಚ್ಚಿಸಿದೆ.