ಹೊಸದಿಗಂತ ವರದಿ,ಮೈಸೂರು:
ಮುಖ್ಯಮಂತ್ರಿಯಾಗಿದ್ದಾಗಲೇ ಮಗನನ್ನು ಮಂಡ್ಯ ಕ್ಷೇತ್ರದಲ್ಲಿ ಗೆಲ್ಲಿಸಲಾಗದ ಹೆಚ್.ಡಿ.ಕುಮಾರಸ್ವಾಮಿ, ಈಗ ಮಂಡ್ಯದಲ್ಲಿ ತಾವೇ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ನಾವು ಅವರ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸಮುಖವನ್ನು ಕಣಕ್ಕಿಳಿಸಿಲ್ಲ. ನಮ್ಮ ಅಭ್ಯರ್ಥಿ ಅವರು ದುರ್ಬಲರಲ್ಲ, ಅಭ್ಯರ್ಥಿ ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರಕ್ಕೆ ಅಪರಿಚಿತರಲ್ಲ, ಅವರು ನಾಗಮಂಗಲದವರು ಮತ್ತು ಯಾವ ದೃಷ್ಟಿಯಿಂದಲೂ ವೀಕ್ ಕ್ಯಾಂಡಿಡೇಟ್ ಅಲ್ಲ ಎಂದು ಸಮರ್ಥಿಸಿಕೊಂಡರು.
೨೦೧೯ ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ್ಯೂ ತಮ್ಮ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರಂತೆಯೇ?, ಅವರು ಎಷ್ಟೇ ಭಾವನಾತ್ಮಕವಾಗಿ ಮಾತಾಡಿದರೂ ಮಂಡ್ಯದಲ್ಲಿ ಗೆಲ್ಲಲಾಗಲ್ಲ. ಹಾಸನದವರಾಗಿರುವ ಹೆಚ್.ಡಿ.ಕುಮಾರಸ್ವಾಮಿಗೆ ಮಂಡ್ಯ ಹೇಗೆ ಕರ್ಮಭೂಮಿಯಾದೀತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.