ಹೊಸದಿಗಂತ ವರದಿ, ಹುಬ್ಬಳ್ಳಿ:
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಹೈಕಮಾಂಡ್ ಬದಲಿಸಬೇಕು. ಮಾ. ೩೧ ರ ವರೆಗೆ ಗಡುವು ನೀಡುತ್ತಿದ್ದು, ಇಲ್ಲವಾದಲ್ಲಿ ಏ.೨ ರಂದು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿರಹಟ್ಟಿ ಪಕ್ಕಿರ ಮಠದ ದಿಂಗಾಲೇಶ್ವರ ಸ್ವಾಮಿಜಿ ಹೇಳಿದರು.
ಬುಧವಾರ ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ೬೦ಕ್ಕೂ ಹೆಚ್ಚು ಸ್ವಾಮೀಜಿಗಳು ನಡೆಸಿದ ಚಿಂತನ ಮಂಥನ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ತಿಳಿದು ರಾಜಕಾರಣ ಮಾಡಬೇಕು ಹೊರತು ಇನ್ನೊಬ್ಬರ ತುಳಿದು ರಾಜಕಾರಣ ಮಾಡಬಾರದು. ಆದ್ದರಿಂದ ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ನೀಡಿದ ಟಿಕೆಟ್ ಹಿಂಪಡೆದು ಅವರನ್ನು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಬಳಸಿಕೊಳ್ಳಬೇಕು ಎಂದರು.
ನಾಲ್ಕು ಬಾರಿ ಲಿಂಗಾಯತರು ಕೇಂದ್ರ ಸಚಿವ ಬೆನ್ನಿಗೆ ನಿಂತು ಆಯ್ಕೆ ಮಾಡಿದ್ದರು. ಆ ಉಪಕಾರಕ್ಕೆ ಕ್ಷೇತ್ರ ತ್ಯಾಗ ಮಾಡಬೇಕು. ಲಿಂಗಾಯತರ ಕ್ಷೇತ್ರದಲ್ಲಿ ಬ್ರಾಹ್ಮಣ ಅನಿವಾರ್ಯವಾದರೇ, ಬ್ರಾಹ್ಮಣರ ಪ್ರಾಬಲ್ಯ ವಿರುವ ಕ್ಷೇತ್ರದಲ್ಲಿ ಲಿಂಗಾಯತ ನಾಯಕ ನಿಲ್ಲಿಸಿ ಅವರನ್ನು ಗೆಲ್ಲಿಸಬೇಕು. ಒಂದು ವೇಳೆ ಅವರು ಸೋತರೆ ಅವರನ್ನು ರಾಜ್ಯ ಸಭಾ ಸದಸ್ಯನಾಗಿ ಮಾಡಬೇಕು ಎಂದು ಹೇಳಿದರು.
ಬದಲಾವಣೆ ಕಾರಣ ಏನು?
ಬಹುಸಂಖ್ಯಾತ ಲಿಂಗಾಯತ ಹಾಗೂ ಇತರ ಸಮಾಜದ ನಾಯಕರು, ಉದ್ಯಮಿಗಳು, ನೌಕರರ ಹಾಗೂ ಕೂಲಿಕಾರ್ಮಿಕರು ಸಚಿವರಿಂದ ತುಳಿತಕ್ಕೆ ಒಳಗಾಗಿದ್ದಾರೆ. ಸೇಡಿನ ರಾಜಕಾರಣದಿಂದ ನಮ್ಮ ನಾಯಕರಿಗೆ ಹಿನ್ನಡೆಯಾಗಿದ್ದು, ದುರ್ಬಲರಾಗಿದ್ದಾರೆ. ಮಹಿಳಾ ಜನಪ್ರತಿನಿಧಿಗಳು ಅವಮಾನಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.