ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಹಲವಾರು ವರ್ಷಗಳಿಂದ ಮೂತ್ರಪಿಂಡದ ಖಾಯಿಲೆ ಮತ್ತು ಇತರ ಖಾಯಿಲೆಗಳಿಂದ ಬಳಲುತ್ತಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಇದೀಗ ಹೊಸ ಜೀವನ ಪಡೆಯಲಿದ್ದಾರೆ. ಮೂತ್ರಪಿಂಡದ ಖಾಯಿಲೆಯಿಂದ ತೊಂದರೆಯಲ್ಲಿರುವ ಅವರಿಗೆ ಸಿಂಗಾಪುರದಲ್ಲಿರುವ ಅವರ ಪುತ್ರಿ ಮೂತ್ರಪಿಂಡ ದಾನ ಮಾಡಲು ಮುಮದಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಅಕ್ಟೋಬರ್ನಲ್ಲಿ ಸಿಂಗಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರ್ಜೆಡಿ ಮುಖ್ಯಸ್ಥರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಿಂಗಾಪುರದ ವೈದ್ಯರು ಸಲಹೆ ನೀಡಿದ ನಂತರ ರೋಹಿಣಿ ತನ್ನ ಒಂದು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ನವೆಂಬರ್ 20-24 ರ ನಡುವೆ ಲಾಲು ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ, ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.
ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಅವರ ಎರಡನೇ ಪುತ್ರಿ ರೋಹಿಣಿ ಅವರು ತಮ್ಮ ತಂದೆಯ ಮೂತ್ರಪಿಂಡದ ಕಾಯಿಲೆಯ ಬಗ್ಗೆ ತುಂಬಾ ಚಿಂತಿತರಾಗಿದ್ದರು ಮತ್ತು ಮೂತ್ರಪಿಂಡ ಕಸಿ ಸಲಹೆ ನೀಡಿದ ವೈದ್ಯರ ತಂಡವನ್ನು ಸಂಪರ್ಕಿಸಲು ಲಾಲು ಸಿಂಗಾಪುರಕ್ಕೆ ಭೇಟಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಿಡ್ನಿ ಸಮಸ್ಯೆಯಿಂದ ಕಳೆದ ಹಲವು ವರ್ಷಗಳಿಂದ ದೆಹಲಿ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಅವರಿಗೆ ಎಐಐಎಂಎಸ್ನ ವೈದ್ಯರು ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿರಲಿಲ್ಲ ಆದರೆ ಸಿಂಗಾಪುರ ಭೇಟಿ ವೇಳೆ ಅಲ್ಲಿನ ವೈದ್ಯರು ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿದರು.
ರೋಹಿಣಿ ಅವರು ಸಿಂಗಾಪುರದಲ್ಲಿ ನೆಲೆಸಿದ್ದರೂ, ಬಿಹಾರದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಮತ್ತು ತಮ್ಮ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ವಿರೋಧಿಗಳಿಗೆ ಪ್ರತಿಕ್ರಿಯೆ ನೀಡುತ್ತ ಸಾಮಾಜಿಕ ವೇದಿಕೆಯಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.