ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗಾಪುರದಲ್ಲಿ ಕಿಡ್ನಿ ಶಸ್ತ್ರಚಿಕಿತ್ಸೆ ನಂತರ ಮೊದಲ ಬಾರಿಗೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಬಹು ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ ಲಾಲು ಅವರಿಗೆ ಎರಡೂ ಕಿಡ್ನಿಗಳ ಸಹ ಹಾನಿಯಾಗಿದ್ದವು. ಹೀಗಾಗಿ ಕಿಡ್ನಿ ಕಸಿಗಾಗಿ ಸಿಂಗಾಪುರಕ್ಕೆ ಕುಟುಂಬ ಕರೆದುಕೊಂಡು ಹೋಗಿದ್ದು, ಮಗಳು ರೋಹಿಣಿ ಆಚಾರ್ಯ ತಮ್ಮ ಒಂದು ಕಿಡ್ನಿಯನ್ನು ತಂದೆಗೆ ದಾನ ಮಾಡಿದ್ದಾರೆ.
ನಿನ್ನೆಯಷ್ಟೇ ಆಪರೇಷನ್ ಥಿಯೇಟರ್ನಿಂದ ಐಸಿಯುಗೆ ಲಾಲು ಅವರನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿರುವ ಲಾಲು ‘ನನಗಾಗಿ ನೀವೆಲ್ಲರೂ ಪ್ರಾರ್ಥಿಸಿದ್ದೀರಿ, ನೀವು ಸಹ ಚೆನ್ನಾಗಿರುತ್ತೀರಿ. ಎಲ್ಲರಿಗೂ ಧನ್ಯವಾದ’ ಎಂದು ಹೇಳಿಕೆ ನೀಡಿದ್ದಾರೆ.
ಇತ್ತ ಪ್ರಧಾನಿ ಮೋದಿ ಅವರು ಕೂಡ ಲಾಲು ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ., ಬಿಹಾರ ಡಿಸಿಎಂ ಆಗಿರುವ ಲಾಲು ಪುತ್ರ ತೇಜಸ್ವಿ ಯಾದವ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಲಾಲು ಆರೋಗ್ಯ ಸುಧಾರಣೆ ಬಗ್ಗೆ ಪ್ರಧಾನಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.